ಹೊಸದಿಲ್ಲಿ: ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಪ್ರಸ್ತುತ ಇರುವ 148 ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 200 ಕ್ಕೂ ಮೀರಿ ಕೊಂಡೊಯ್ಯುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ಹೇಳಿದ್ದಾರೆ.
“ಈ ಪ್ರಯತ್ನವು ದೊಡ್ಡ ಮೆಟ್ರೋ ವಿಮಾನ ನಿಲ್ದಾಣಗಳು ಮತ್ತು ದೂರದ ವಿಮಾನ ನಿಲ್ದಾಣಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ” ಎಂದು ಅವರು ಮೊದಲ ಇಂಡಿಗೋ ಏರ್ಲೈನ್ ದೆಹಲಿ-ಧರ್ಮಶಾಲಾ-ದೆಹಲಿ ವಿಮಾನಕ್ಕೆ ಫ್ಲ್ಯಾಗ್ ಆಫ್ ಮಾಡಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶಕ್ಕೆ ಇಂಡಿಗೋ ವಿಮಾನ ಸಂಪರ್ಕ ಕಲ್ಪಿಸಿರುವುದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು. ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಯೋಜನೆಯಿಂದಾಗಿ ‘ಹವಾಯಿ ಚಪ್ಪಲ್’ (ಚಪ್ಪಲಿ) ನಲ್ಲಿರುವ ಜನರು ‘ಹವಾಯಿ ಜಹಾಜ್’ (ಏರೋಪ್ಲೇನ್) ನಲ್ಲಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು.