ನವದೆಹಲಿ: ಕಾಂಗ್ರೆಸ್ನ ಗ್ಯಾರಂಟಿ ವಿಫಲತೆ, ಬರಗಾಲ, ರೈತರ ಕುರಿತು ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ 45 ನಿಮಿಷಗಳ ಕಾಲ ಚರ್ಚೆ ಮಾಡಲಾಯಿತು.
ಈ ವೇಳೆ ಕಾಂಗ್ರೆಸ್ನ ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಕುರಿತು ಚರ್ಚೆ ಮಾಡಿದ್ದೇವೆ. ಈ ಬಾರಿಯ ಲೋಕಸಭಾ ಎಲೆಕ್ಷನ್ನಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವುದು ಮುಖ್ಯ ಉದ್ದೇಶವಾಗಿದೆ. ರಾಜ್ಯದ ಪ್ರಗತಿಗಾಗಿ ಎನ್ಡಿಎ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದರು.
ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅಯೋಧ್ಯೆಯ ರಾಮ ಪ್ರತಿಷ್ಠಾಪನೆ ಬಳಿಕ ಸೀಟ್ ಹೊಂದಾಣಿಕೆ ಚರ್ಚೆಯಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತೆ, ದೌರ್ಬಲ್ಯವೇನು ಎಂಬುದರ ಬಗ್ಗೆ ಚರ್ಚಿಸಿದೇವು. ಇನ್ನು ಕೇವಲ ಎರಡು ತಿಂಗಳು ಇದೆ. ಈಗ ಕೇಂದ್ರದ ಮಂತ್ರಿಯಾಗಿ ನಾನೇನು ಮಾಡಲು ಸಾಧ್ಯ. ಇದು ಯಾವ ಮೂಲದಿಂದ ಸುದ್ದಿ ಬಂತೋ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕೇಂದ್ರದಲ್ಲಿ 40 ವರ್ಷ ಕಾಂಗ್ರೆಸ್ ಆಡಳಿತದಲ್ಲಿತ್ತು. ರಾಜ್ಯದ ನೀರಾವರಿಗೆ ಕಾಂಗ್ರೆಸ್ನ ಕೊಡುಗೆ ಏನಿದೆ. ಎಲ್ಲಿ ಲೋಪವಾಗಿದೆ ಎಂದು ದೆಹಲಿಗೆ ಬಂದು ಚರ್ಚಿಸಬೇಕು ಎಂದು ಹೇಳಿದರು.