ನವದೆಹಲಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ರಾಜ್ಯಸಭಾ ಸದಸ್ಯರಾಗಿ ಗುರುವಾರ ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಅಥ್ಲೀಟ್ ಪಿ.ಟಿ.ಉಷಾ ಹಾಗೂ ಚಲನಚಿತ್ರ ಕಥೆ- ಸಂಭಾಷಣೆಕಾರ ವಿಜಯೇಂದ್ರ ಪ್ರಸಾದ್ ಅವರನ್ನು ಜೂನ್ 7ರಂದು ನಾಮನಿರ್ದೇಶನ ಮಾಡಲಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತ ನಾಡಿದ ಅವರು, ಬೇರೆ ರಾಜ್ಯಗಳಿಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ, ಈ ಹಿಂದೆ ಹಲವು ಮಂದಿ ಮನವಿ ಮಾಡಿದ್ದರು. ಆಗ ಸಾಧ್ಯ ಆಗಿರಲಿಲ್ಲ. ಆದರೆ, ಈಗ ಸರ್ಕಾರ ನಮ್ಮ ಜತೆಗೆ ಇದೆ. ಹೀಗಾಗಿ, ಯೋಜನೆಯನ್ನು ವಿಸ್ತರಣೆ ಮಾಡಲು ವಿಚಾರ ಮಾಡುತ್ತಿದ್ದೇವೆ’ ಎಂದರು.
‘ಈ ಹಿಂದೆ ಪದ್ಮ ಪ್ರಶಸ್ತಿಗಳನ್ನು ಪಡೆಯಲು, ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಅರ್ಜಿ ಹಾಕಬೇಕಿತ್ತು. ನಾಯಕರಿಗೆ ದುಂಬಾಲು ಬೀಳಬೇಕಿತ್ತು. ಕಳೆದ ಐದು ವರ್ಷಗಳಲ್ಲಿ ಈ ವ್ಯವಸ್ಥೆಯಲ್ಲಿ ಬಹಳ ಸುಧಾರಣೆ ಆಗಿದೆ. ಸಾಧಕರನ್ನು ಗುರುತಿಸಿ ಆಯ್ಕೆ ಮಾಡುತ್ತಿದ್ದಾರೆ. ನಾಮನಿರ್ದೇಶನಗೊಳ್ಳುವ ಬಗ್ಗೆ ಆಸೆ ಪಟ್ಟಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕಿದೆ. ಸಂತೋಷವಾಗಿದೆ. ರಾಜ್ಯಸಭಾ ಸದಸ್ಯರಾಗಿರುವುದರಿಂದ ಇನ್ನಷ್ಟು ಸೇವೆ ಮಾಡಲು ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.