ನವದೆಹಲಿ: ಈಡಿ ಅಧಿಕಾರಿಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಸಿಎಂ ಕೊಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಅವರಿಗಾಗಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ ಎಂದು ದೆಹಲಿ ಜನರಿಗೆ ಕರೆ ನೀಡಿದ್ದಾರೆ.
ನಂತರ ಕೇಜ್ರಿವಾಲ್ ಜೈಲಿನಿಂದ ಕಳಿಸಿದ ಸಂದೇಶವನ್ನು ಸುನೀತಾ ಓದಿದ್ದಾರೆ. ತಾವು ಜೈಲು ಸೇರಿರುವುದರಿಂದ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣದ ಕೆಲಸಗಳು ನಿಲ್ಲಬಾರದು ಎಂದು ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ಪತ್ರದ ಮೂಲಕ ಮನವಿ ಮಾಡಿರುವ ಸಿಎಂ, ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ ಸಹೋದರಿಯರು ಎನ್ನುತ್ತ, ನಾನು ಶೀಘ್ರದಲ್ಲಿ ಮರಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ʼಭಾರತದ ಒಳಗೆ ಮತ್ತು ಹೊರಗೆ ಅನೇಕ ಶಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನಾವು ಜಾಗರೂಕರಾಗಿರಬೇಕು, ಈ ಶಕ್ತಿಗಳನ್ನು ಗುರುತಿಸಿ ಅವುಗಳನ್ನು ಸೋಲಿಸಬೇಕು. ಕೇಜ್ರಿವಾಲ್ ಕಂಬಿ ಹಿಂದೆ ಬಿದ್ದಿದ್ದಾರೆ ಎಂದು ದೆಹಲಿಯ ಮಹಿಳೆಯರು ಯೋಚಿಸುತ್ತಿರಬಹುದು. 1,000 ಸಿಗುತ್ತದೆಯೋ ಇಲ್ಲವೋ ಯಾರಿಗೆ ಗೊತ್ತು ಅಂತಾ ಹೇಳುತ್ತಿರಬಹುದು. ಈ ಮೂಲಕ ಅವರ ಸಹೋದರ, ಮಗನಾಗಿರುವ ನನ್ನನ್ನು ನಂಬುವಂತೆ ಮನವಿ ಮಾಡುತ್ತೇನೆ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಗಳನ್ನೆಲ್ಲಾ ಈಡೇರಿಸುತ್ತೇನೆʼ ಎಂದು ಹೇಳಿದ್ದಾರೆ.
ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕಾಗಿ ಸಮರ್ಪಿತವಾಗಿದ್ದು, ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನದ ಪ್ರತಿ ಕ್ಷಣವೂ ದೇಶ ಸೇವೆಗೆ ಮುಡಿಪಾಗಿದೆ ಎಂದ ಕೇಜ್ರಿವಾಲ್, ಭಾರತವನ್ನು ವಿಶ್ವದ ಬಲಿಷ್ಠ ಮತ್ತು ಶ್ರೇಷ್ಠ ದೇಶವಾಗಿ ರೂಪಿಸಬೇಕಿದೆ. ದೇಶವನ್ನು ದುರ್ಬಲಗೊಳಿಸಲು ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇವುಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ಬರೆದಿದ್ದಾರೆ.