ನವದೆಹಲಿ: ಸಿಖ್ ವಿರೋಧಿ ದಂಗೆ ಕುರಿತು ಮಹತ್ವದ ಬೆಳವಣಿಗೆಯೊಂದು ಜರುಗಿದ್ದು, ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ದೆಹಲಿಯ ಗುರುದ್ವಾರ ಪುಲ್ ಬಂಗಾಶ್ ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಅವರ ವಿರುದ್ಧ ಕೇಂದ್ರೀಯ ತನಿಖಾ ದಳ ಚಾರ್ಜ್ ಶೀಟ್ ಸಲ್ಲಿಸಿದೆ.
39 ವರ್ಷಗಳಷ್ಟು ಹಳೆಯದಾದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. “ಟೈಟ್ಲರ್ ಸಿಖ್ಖರನ್ನು ಕೊಲ್ಲಲು ಜನಸಮೂಹವನ್ನು ಪ್ರಚೋದಿಸಿದರು, ಇದರ ಪರಿಣಾಮವಾಗಿ ಗುರುದ್ವಾರ ಪುಲ್ ಬಂಗಾಶ್ ಅನ್ನು ಜನಸಮೂಹವು ಸುಟ್ಟುಹಾಕಿತು. 1984 ನವೆಂಬರ್ 1ರಂದು ಸಿಖ್ ಸಮುದಾಯಕ್ಕೆ ಸೇರಿದ ಮೂವರನ್ನು ಕೊಂದಿತು” ಎಂದು ಸಿಬಿಐ ಹೇಳಿದೆ. ಗುರುದ್ವಾರ ಪುಲ್ ಬಂಗಾಶ್, ಠಾಕೂರ್ ಸಿಂಗ್ ಮತ್ತು ಬಾದಲ್ ಸಿಂಗ್ ರನ್ನು ಹತ್ಯೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ನಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರನ್ನು ಉಲ್ಲೇಖಿಸಿ ಸಿಬಿಐ ಚಾರ್ಜ್ ಶೀಟ್ ಉಲ್ಲೇಖಿಸಿದೆ. ಜೊತೆಗೆ, ಪೆಟ್ರೋಲ್ ಬಾಟಲ್, ಲಾಠಿ, ಕತ್ತಿಗಳು ಮತ್ತು ರಾಡ್ಗಳನ್ನು ಹೊತ್ತೊಯ್ಯುತ್ತಿದ್ದ ಗುಂಪನ್ನು ನೋಡಿದ ಇನ್ನೊಬ್ಬ ಸಾಕ್ಷಿಯನ್ನು ಚಾರ್ಜ್ಶೀಟ್ ಉಲ್ಲೇಖಿಸಿದೆ. ಅಂದು ಸಂಸದರಾಗಿದ್ದ ಜಗದೀಶ್ ಟೈಟ್ಲರ್ ಕೂಡ ಗುರುದ್ವಾರ ಪುಲ್ ಬಂಗಾಶ್ ಎದುರು ಹಾಜರಾಗಿದ್ದರು ಎಂದ ಅವರು, ಕಾಂಗ್ರೆಸ್ ನಾಯಕರು ಗುರುದ್ವಾರದ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸಿದ್ದರು ಎಂದು ಸಿಬಿಐ ಹೇಳಿದೆ.