ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಆಯಾ ರಾಜ್ಯಗಳ ಸರ್ಕಾರವೇ ಜವಾಬ್ದಾರಿ. ಈ ಬಗ್ಗೆ ಜನರು ತಮ್ಮದೇ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಿನ್ನೆ (ಮಂಗಳವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇಂಧನ ದರವನ್ನು ಮತ್ತಷ್ಟು ತಗ್ಗಿಸಲು ಮೌಲ್ಯವರ್ಧಿತ ತೆರಿಗೆ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಮನವಿ ಮಾಡಿದೆ.
ಜಿಎಸ್ಟಿ ಕೌನ್ಸಿಲ್ ಇಂಧನ ಸೇರ್ಪಡೆಗೆ ದರವನ್ನು ನಿಗದಿಪಡಿಸುವವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಸೇರಿಸಲಾಗುವುದಿಲ್ಲ” ಎಂದು ತಿಳಿಸಿದರು.