ನವದೆಹಲಿ: ಕೇಂದ್ರ ಸರ್ಕಾರ ದೇಶದ ಜನತೆಗೆ ಗುಡ್ ನ್ಯೂಸ್ ನೀಡಿದ್ದು, ಉಚಿತ ಪಡಿತರ ಒದಗಿಸುವ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನ ಮಾರ್ಚ್ 2022 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.
ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಂಪುಟ ನಿರ್ಧಾರಗಳ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಅದ್ರಂತೆ, ‘ಉಚಿತ ಪಡಿತರ ಒದಗಿಸುವ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನ ಮಾರ್ಚ್ 2022 ರವರೆಗೆ ವಿಸ್ತರಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಅಂದ್ಹಾಗೆ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ 2020 ರ ಮಾರ್ಚ್ʼನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ನು ಘೋಷಿಸಿದ್ರು. ಇನ್ನು ಈ ಯೋಜನೆಯನ್ನು ಆರಂಭದಲ್ಲಿ ಏಪ್ರಿಲ್-ಜೂನ್ 2020ರ ಅವಧಿಗೆ ಪ್ರಾರಂಭಿಸಲಾಯಿತು. ಆದ್ರೆ, ನಂತ್ರ ನವೆಂಬರ್ 30 ರವರೆಗೆ ವಿಸ್ತರಿಸಲಾಯಿತು. ಈಗ ಸರ್ಕಾರ ಮತ್ತೊಮ್ಮೆ 2022ರ ಮಾರ್ಚ್ ವರೆಗೆ ಉಚಿತ ಪಡಿತರ ಒದಗಿಸಲು ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ವಿಸ್ತರಿಸಿದೆ.