ಗುವಾಹಾಟಿ: “ದೇಶದ ಕೋಟ್ಯಾನು ಕೋಟಿ ಜನತೆ ಮೋದಿಯವರ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟಿದ್ದು, ಹೃದಯಾಂತರಾಳದಿಂದ ಅವರನ್ನು ಪ್ರೀತಿಸುತ್ತಾರೆ. ಹಾಗಾಗಿಯೇ ಅವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದಿದ್ದರೂ ರಾಜಕೀಯ ರಂಗದಲ್ಲಿ ಹಂತಹಂತವಾಗಿ ಮೇಲೇರಿ ಇಂದು ದೇಶದ ಪ್ರಧಾನಿಯಾಗಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬುಧವಾರ ದಿಲ್ಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, “ಮೋದಿ ಆಯಟ್ 20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಬಗ್ಗೆ ಜನರಿಗಿದ್ದ ಹಲವಾರು ಅಭಿಪ್ರಾಯಗಳನ್ನು ಸುಳ್ಳೆಂದು ಸಾಬೀತು ಮಾಡಿದ್ದಾರೆ. ಹಾಗಾಗಿಯೇ, ಬಿಜೆಪಿಯು ಗುಜರಾತ್ನಿಂದ ಈಶಾನ್ಯ ರಾಜ್ಯಗಳವರೆಗೆ, ಅಸ್ಸಾಂನಿಂದ ಮಣಿಪುರವರೆಗೆ ಆಡಳಿತ ನಡೆಸುತ್ತಿದೆ” ಎಂದಿದ್ದಾರೆ.
ವಿರೋಧಿಗಳೂ ಮೆಚ್ಚುತ್ತಾರೆ-ನಾಯ್ಡು: ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, “ಗಾಂಧೀಜಿ, ಅಗ್ರ ನಾಯಕರಿಗೆ ಮಾತ್ರ ಸೀಮಿತವಾಗಿದ್ದ ಸ್ವತಂತ್ರ ಚಳವಳಿ ಯನ್ನು ಜನಸಾಮಾನ್ಯರ ಚಳವಳಿಯ ನ್ನಾಗಿ ರೂಪಿಸಿದರು. ಹಾಗೆಯೇ ಮೋದಿ ಅಭಿವೃದ್ಧಿ ವಿಚಾರಗಳನ್ನು ಜನ ಸಾಮಾನ್ಯರ ಚಳವಳಿಯಾಗಿ ರೂಪಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಅವರಿಗಿರುವ ವಿಚಾರಧಾರೆ, ದೂರದೃಷ್ಟಿತ್ವವನ್ನು ಮೋದಿಯವರ ಕಡು ವಿರೋಧಿಗಳೂ ಇಷ್ಟಪಡುತ್ತಾರೆ” ಎಂದು ಅವರು ಹೇಳಿದರು.
ಬಿಜೆಪಿ ಅಭಿಯಾನ
ಪ್ರಧಾನಿ ನರೇಂದ್ರ ಮೋದಿಯವರ ಸರಕಾರಕ್ಕೆ 8 ವರ್ಷ ಪೂರೈಸುತ್ತಿರುವ ಹಿನ್ನೆಲೆ ಬಿಜೆಪಿಯು ಮೇ 30ರಿಂದ 15 ದಿನಗಳ ರಾಷ್ಟ್ರಾದ್ಯಂತ ಅಭಿಯಾನ ನಡೆಸಲು ಸಿದ್ಧತೆ ಮಾಡಿಕೊಂಡಿದೆ. “8 ವರ್ಷ: ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ’ ಹೆಸರಿನಲ್ಲಿ ನಡೆಯಲಿರುವ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. “ಅಲ್ಪಸಂಖ್ಯಾಕ ರೊಂದಿಗೆ ಸಂವಾದ’, “ಬುಡಕಟ್ಟು ಮೇಳ’, “ಬಿರ್ಸಾ ಮುದ್ರಾ ವಿಶ್ವಾಸ ರ್ಯಾಲಿ’ ಸೇರಿ ಅನೇಕ ಕಾರ್ಯಕ್ರಮಗಳನ್ನು ಈ ಅಭಿಯಾನದಲ್ಲಿ ನಡೆಸಲಾಗುವುದು. ಬಿಜೆಪಿ ಯುವ ಮೋರ್ಚಾ ಮತ್ತು ಭಾರತೀಯ ಯುವ ಜನ ಮೋರ್ಚಾಕ್ಕೆ ಪ್ರಭಾತ ಪೇರಿ ನಡೆಸುವ ಜವಾಬ್ದಾರಿ ಕೊಡಲಾಗಿದೆ.