ಅಮರಾವತಿ, ನ.17: ಭಿಕ್ಷೆ ಬೇಡುವ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಆಂಧ್ರಪ್ರದೇಶದ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಆಂಧ್ರಪ್ರದೇಶದ ತುಲಿಯಲ್ಲಿರುವ ಪೋಲ್ನಾಟಿ ಶೇಷಗಿರಿ ರಾವ್ ಅವರ ಮನೆಗೆ ಭಿಕ್ಷೆ ಬೇಡುವ ರೀತಿಯಲ್ಲಿ ವೇಷ ಧರಿಸಿಕೊಂಡು ಬಂದ ವ್ಯಕ್ತಿ ಶೇಷಗಿರಿ ಅವರಲ್ಲಿ ಭಿಕ್ಷೆ ಕೇಳಿದ್ದಾನೆ ಅದರಂತೆ ನಾಯಕ ಮನೆಯಲ್ಲಿದ್ದ ಅಕ್ಕಿ ತಂದು ವ್ಯಕ್ತಿಯ ಜೋಳಿಗೆಗೆ ಸುರಿಯುವ ವೇಳೆ ತನ್ನಲ್ಲಿದ್ದ ಹರಿತವಾದ ಕತ್ತಿಯಿಂದ ಶೇಷಗಿರಿ ರಾವ್ ಅವರ ಮೇಲೆ ದಾಳಿ ನಡೆಸಿ ಮನೆಯ ಹೊರಗೆ ಬೈಕ್ ನಲ್ಲಿ ನಿಂತ್ತಿದ್ದ ಇನ್ನೋರ್ವ ಸಹಚರನ ಜೊತೆ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿಯ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಿ. ಶೇಷಗಿರಿ ರಾವ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಕಾಕಿನಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.