ಅಮರಾವತಿ, ಫೆ.5: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ನೋಡಲು ಸ್ಥಳಕ್ಕಾಗಮಿಸಿದ ವಾರ್ಡನ್ ಆಘಾತದಿಂದ ಸಾವನ್ನಪ್ಪಿದ್ದಾರೆ.
ಗುಡೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದಹನೇಶ್ವರ ರೆಡ್ಡಿ (20) ಶನಿವಾರ ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಎಸ್ಆರ್ ಕಡಪ ಜಿಲ್ಲೆಯವನಾದ ವಿದ್ಯಾರ್ಥಿ ಸಿಎಸ್ಇ ಎರಡನೇ ವರ್ಷ ಓದುತ್ತಿದ್ದನು.
ವಿಷಯ ತಿಳಿದ ಹಾಸ್ಟೆಲ್ ವಾರ್ಡನ್ ಬಿ.ಶ್ರೀನಿವಾಸ್ ನಾಯ್ಡು, ಕಾಲೇಜಿನ ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಧಾವಿಸಿದರು.
ಶ್ರೀನಿವಾಸುಲು ನಾಯ್ಡು (54) ಎಂಬವರು ನೇಣು ಬಿಗಿದುಕೊಂಡ ವಿದ್ಯಾರ್ಥಿಯನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಅವರು ಕುಸಿದುಬಿದ್ದು ಸ್ಥಳದಲ್ಲೇ ನಿಧನರಾದರು. ನಾಯ್ಡು ಅವರಿಗೆ ಹೃದಯ ಸ್ತಂಭನವಾಗಿದೆ ಎಂದು ಶಂಕಿಸಲಾಗಿದೆ.
ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.