ಆಂಧ್ರಪ್ರದೇಶ: ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಪ್ರಸ್ತುತ ಇವರು ತೆಲಂಗಾಣದಲ್ಲಿ ಸಕ್ರಿಯವಾಗಿರುವ ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷೆಯಾಗಿದ್ದಾರೆ.
ಶರ್ಮಿಳಾ ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರು ಅವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿದ್ದರೆ, ಅವರ ಮಗ ಮತ್ತು ಶರ್ಮಿಳಾ ಅವರ ಹಿರಿಯ ಸಹೋದರ ಜಗನ್ ಮೋಹನ್ ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ.
ಹಿಂದಿನ ವರ್ಷ ಅಂದರೆ 2023ರ ಸೆಪ್ಟೆಂಬರ್ನಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಗ ವಿಲೀನದ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಕೇಳಿದಾಗ, ಇದು ಅತ್ಯಂತ ಸೌಹಾರ್ದಯುತ ಭೇಟಿಯಾಗಿತ್ತು. ಇದು ತುಂಬಾ ಒಳ್ಳೆಯ ಸಭೆಯಾಗಿತ್ತು. ಉಳಿದಂತೆ, ನೀವು ಕಾದು ನೋಡಿ ಎಂದಿದ್ದರು. ಈ ವರ್ಷದ ಆರಂಭದಲ್ಲಿ, ಶರ್ಮಿಳಾ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದಾರೆ. ಏತನ್ಮಧ್ಯೆ, ವೈಎಸ್ ಶರ್ಮಿಳಾ ಜ. 3 ರಂದು ದೆಹಲಿಗೆ ತೆರಳಿದ್ದಾರೆ.