ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಆರೋಗ್ಯ ಕ್ಷೇತ್ರವು ಗಳಿಸಿದ ಜಾಗತಿಕ ನಂಬಿಕೆಯು, ಈಚಿನ ದಿನಗಳಲ್ಲಿ ಭಾರತವನ್ನು ‘ವಿಶ್ವದ ಔಷಧಾಲಯ’ ಎಂದು ಕರೆಯಲು ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಫಾರ್ಮಾಸ್ಯುಟಿಕಲ್ಸ್ ವಲಯದ ಪ್ರಥಮ ಜಾಗತಿಕ ಶೃಂಗ ಉದ್ಘಾಟಿಸಿ, ಸಾಂಕ್ರಾಮಿಕ ರೋಗವು ಫಾರ್ಮಾಸ್ಯುಟಿಕಲ್ಸ್ ವಲಯದತ್ತ ಜನ ಗಮನ ಹರಿಸುವಂತೆ ಮಾಡಿದೆ. ಜೀವನಶೈಲಿ, ಔಷಧಗಳು, ವೈದ್ಯಕೀಯ ತಂತ್ರಜ್ಞಾನ, ಲಸಿಕೆಗಳು… ಹೀಗೆ ಆರೋಗ್ಯ ರಕ್ಷಣೆಯ ಪ್ರತಿಯೊಂದು ಅಂಶವು ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಗಮನಸೆಳೆದಿದೆ ಎಂದು ತಿಳಿಸಿದರು.
ಕ್ಷೇಮದ ನಮ್ಮ ವ್ಯಾಖ್ಯಾನವು ಭೌತಿಕ ಗಡಿಗಳಿಗೆ ಸೀಮಿತವಾಗಿಲ್ಲ. ನಾವು ಇಡೀ ಮಾನವಕುಲದ ಯೋಗಕ್ಷೇಮವನ್ನು ಬಯಸುತ್ತೇವೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ನಾವು ಈ ಮನೋಭಾವವನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ. ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ನಾವು 150 ದೇಶಗಳಿಗೆ ಜೀವರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಿದ್ದೇವೆ. ನಾವು ಈ ವರ್ಷ ಸುಮಾರು 100 ದೇಶಗಳಿಗೆ 65 ಮಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ್ದೇವೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ನವೀನ ವೈದ್ಯಕೀಯ ಸಾಧನಗಳು ಹಾಗೂ ಔಷಧ ಆವಿಷ್ಕಾರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸುವುದಕ್ಕಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ. ಭಾರತವು ಉದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಹೊಂದಿದೆ. ಈ ಶಕ್ತಿಯನ್ನು ಅನ್ವೇಷಣೆ ಮತ್ತು ಮೇಕ್ ಇನ್ ಇಂಡಿಯಾಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯ ಉಪಸ್ಥಿತರಿದ್ದರು.