ಚೀನಾದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಕಡಿತವಾಗಿ ಅಲ್ಲಿನ ಕಾರ್ಖಾನೆಗಳು ಮತ್ತು ಜನಜೀನವ ಅಸ್ತವ್ಯಸ್ತವಾಗಿದೆ ಎಂಬುದನ್ನು ಓದಿಯೇ ಇರುತ್ತೀರಿ. ಆದರೆ ಈ ಕಲ್ಲಿದ್ದಿಲಿನ ಅಭಾವ ಎನ್ನುವುದು ಕೇವಲ ಚೀನಾದ ತಲೆಬಿಸಿ ಅಲ್ಲ. ಭಾರತದಲ್ಲೂ ಸಹ ಕಲ್ಲಿದ್ದಿಲಿನ ಪೂರೈಕೆ ಅಷ್ಟು ಸರಾಗವಾಗಿಲ್ಲ. ಶೇ. 70ರಷ್ಟು ವಿದ್ಯುತ್ ಉಷ್ಣವಿದ್ಯುತ್ ಸ್ಥಾವರಗಳಿಂದಲೇ ದೊರೆಯುತ್ತಿರುವ ಭಾರತದಲ್ಲಿ ಕಲ್ಲಿದ್ದಿಲಿನ ಮಹತ್ವ ಸದ್ಯಕ್ಕಂತೂ ದೊಡ್ಡದು.
ಆದರೆ, ಬ್ಲೂಮ್ಬರ್ಗ್ ವರದಿಯನ್ನು ನಂಬುವುದಾದರೆ, ಈ ಹಂತದಲ್ಲಿ ಭಾರತ ತನ್ನ ಕಲ್ಲಿದ್ದಲು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಜಿಯೊಪಾಲಿಟಿಕ್ಸ್ ಆಟವನ್ನೇ ಆಡಿದೆ! ಚೀನಾಕ್ಕೆ ಪ್ರಮುಖವಾಗಿ ಕಲ್ಲಿದ್ದಲು ಪೂರೈಸುತ್ತಿದ್ದ ದೇಶ ಆಸ್ಟ್ರೇಲಿಯ. ಕೊರೋನಾ ಶುರುವಾದ ಮೇಲೆ ಆಸ್ಟ್ರೇಲಿಯ ಮತ್ತು ಚೀನಾಗಳ ದ್ವಿಪಕ್ಷೀಯ ಸಂಬಂಧ ಬಿಗಡಾಯಿಸುತ್ತಲೇ ಹೋಯಿತು. ಆಸ್ಟ್ರೇಲಿಯಕ್ಕೆ ಪಾಠ ಕಲಿಸಬೇಕೆಂದು ಚೀನಾ ಅಲ್ಲಿಂದ ಬರುತ್ತಿದ್ದ ಕಲ್ಲಿದ್ದಿಲಿನ ಮೇಲೆ ಪ್ರತಿಬಂಧ ಹೇರಿತು.
ಪರಿಣಾಮವೆಂಬಂತೆ, ಕಲ್ಲಿದ್ದಲು ಹೊತ್ತು ಚೀನಾಕ್ಕೆ ತೆರಳಿದ್ದ ಸುಮಾರು 70 ಹಡಗುಗಳು ಅಲ್ಲಿಯೇ ನಿಲ್ಲುವಂತಾಯಿತು. ಕೆಲವು ದಾಸ್ತಾನು ಮಳಿಗೆಗೆ ಕಲ್ಲಿದ್ದಲನ್ನು ಹಾಕಿದರೂ ಅವು ಅಲ್ಲಿಂದ ಮುಂದಕ್ಕೆ ಹೋಗಲಿಲ್ಲ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಇದೀಗ ಭಾರತದ ಕಂಪನಿಗಳು ಹೀಗೆ ತ್ರಿಶಂಕು ಸ್ಥಿತಿಯಲ್ಲಿ ಚೀನಾ ತೀರದ ಬಳಿಯಲ್ಲಿರುವ ಆಸ್ಟ್ರೇಲಿಯದ ಕಲ್ಲಿದ್ದಿಲಿನ ಬಹುಭಾಗವನ್ನು ತಾವು ಖರೀದಿಸುತ್ತಿವೆ.
ಇದರಿಂದ ಭಾರತಕ್ಕೆ ಕಲ್ಲಿದ್ದಲು ಪೂರೈಕೆ ಆದಂತೆಯೂ ಆಯಿತು. ಮಿತ್ರ ಆಸ್ಟ್ರೇಲಿಯಕ್ಕೆ ನೆರವಾದಂತೆಯೂ ಆಯಿತು. ಜತೆಗೆ ಪರೋಕ್ಷವಾಗಿ ಚೀನಾಕ್ಕೆ “ನಿನ್ನೊಬ್ಬನಿಂದಲೇ ಜಾಗತಿಕ ವ್ಯಾಪಾರದ ಬೇಳೆ ಬೆಯ್ಯುವುದಿಲ್ಲ” ಎಂದಂತೆಯೂ ಆಯಿತು.
ಭಾರತದಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಹೇರಳವಾಗಿಯೇ ಇದ್ದರೂ ಅವುಗಳ ಸಂಸ್ಕರಣೆ ಲಾಗಾಯ್ತಿನಿಂದ ಸರ್ಕಾರಿ ನಿಯಂತ್ರಣದಲ್ಲಿ ಸೊರಗಿತ್ತು. ಇತ್ತೀಚೆಗೆ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆಯಾದರೂ ಅವೆಲ್ಲದರ ಪರಿಣಾಮ ದಾಖಲಾಗುವುದಕ್ಕೆ ಸಮಯ ಹಿಡಿಯಲಿದೆ. ಸದ್ಯಕ್ಕೆ ಭಾರತದ ಶೇಕಡ 80ರಷ್ಟು ಕಲ್ಲಿದ್ದಲು ಸ್ಥಾವರಗಳಲ್ಲಿ ಕೇವಲ ವಾರಕ್ಕಾಗುವಷ್ಟು ಕಲ್ಲಿದ್ದಿಲಿನ ದಾಸ್ತಾನು ಮಾತ್ರವಿದೆ ಎನ್ನಲಾಗಿದೆ.