ಪ್ರಧಾನಿ ಮೋದಿಯವರು ಇಂದು ಭಾರತದ ಮೂಲ ಸೌಕರ್ಯ ಸುಧಾರಿಸುವ ನೂರು ಲಕ್ಷ ಕೋಟಿ ರೂ. ಬೃಹತ್ ಯೋಜನೆ ‘ಗತಿಶಕ್ತಿ’ಗೆ ಚಾಲನೆ ನೀಡಲಿದ್ದಾರೆ. ಎರಡು ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ಜಾಲ, ಗ್ಯಾಸ್ ಪೈಪ್ಲೈನ್ ನೆಟ್ವರ್ಕ್ನ್ನು 35,000 ಕಿ.ಮೀಗೆ ದ್ವಿಗುಣಗೊಳಿಸುವುದು, ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 220ಕ್ಕೆ ಹೆಚ್ಚಿಸುವುದು ಹಾಗೂ 11 ಕೈಗಾರಿಕಾ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಬಹುಮುಖ್ಯ ಅಂಶವಾಗಿದೆ. ಪ್ರಧಾನಿ ಮೋದಿಯವರ 100 ಲಕ್ಷ ಕೋಟಿ ರೂ. ಗತಿಶಕ್ತಿ ಯೋಜನೆಯ ಮಾಸ್ಟರ್ಪ್ಲಾನ್ ಇದಾಗಿದೆ.
ಪ್ರಸ್ತಾವಿತ ರಾಷ್ಟ್ರೀಯ ಮಾಸ್ಟರ್ಪ್ಲಾನ್ನಲ್ಲಿ, ಎಲ್ಲಾ ಅಸ್ತಿತ್ವವಿರುವ ಮತ್ತು ಪ್ರಸ್ತಾವಿತ ಆರ್ಥಿಕ ವಲಯಗಳನ್ನು ಮಲ್ಟಿಮೋಡಲ್ ಕನೆಕ್ಟಿವಿಟಿ ಮೂಲಕ ಒಂದೇ ಪ್ಲಾಟ್ಫಾರ್ಮ್ನಲ್ಲಿ ಮೂರು ಕಾಲಾವಧಿಯಲ್ಲಿ ಸೇರಿಸಲಾಗುತ್ತದೆ. ಅಂದರೆ 2014-15ರ ಸ್ಥಿತಿಯಂತೆ, 2020-21ರ ಸಮಯದಲ್ಲಿ ಮಾಡಿದ ಸಾಧನೆಗಳನ್ನು ಒಳಗೊಂಡು 2024-25ರಲ್ಲಿ ಜನರ ಒಳಿತಿಗಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಹೆದ್ದಾರಿ, ಪೈಪ್ಲೈನ್, ಬಂದರು ಇವೆಲ್ಲ ವಿಭಾಗಗಳಲ್ಲಿ ಯೋಜನೆಗಳು ಅದಾಗಲೇ ಅಸ್ತಿತ್ವದಲ್ಲಿವೆ. ಆದರೆ, ಇವೆಲ್ಲವೂ ಅವರವರ ಪಾಡಿಗೆ ಅವು ಎಂಬಂತೆ ಇರದೆ, ಸಂಪರ್ಕ ಮತ್ತು ಸಂಪನ್ಮೂಲ ಸೃಷ್ಟಿ ಕ್ರಿಯೆಯಲ್ಲಿ ಒಂದಕ್ಕೊಂದು ಪೂರಕವಾಗಿ ಹೆಜ್ಜೆ ಹಾಕುವುದನ್ನು ಗತಿಶಕ್ತಿ ಖಾತ್ರಿಪಡಿಸುತ್ತದೆ.
ಯೋಜನೆಯ ಸಮಗ್ರ ಭೂಪಟವು ಮೂಲಭೂತ ಸೌಕರ್ಯ ಅಭಿವೃದ್ಧಿಯ ಪಕ್ಷಿನೋಟ ನೀಡುತ್ತದೆ. ದೇಶದಾದ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳಿಗೆ ಸಂಪರ್ಕ ಕಲ್ಪಿಸಲು ಮತ್ತು ಉದ್ಯೋಗ ಸೃಷ್ಟಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ.