ಮುಂಬೈ: ಮುಂಬೈ ಮಹಾನಗರಿಯಲ್ಲಿ ಇಂದು ಬೆಳಗ್ಗೆ ಸಿಯೊನ್ ಪೂರ್ವ ಮತ್ತು ಅಂಧೇರಿ ಉಪ ನಗರಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ.
ಭಾರತೀಯ ಹವಾಮಾನ ಇಲಾಖೆ ನಾಳೆ ಮತ್ತು ನಾಡಿದ್ದು ಮುಂಬೈಯಲ್ಲಿ ತೀವ್ರ ಮಳೆಯುಂಟಾಗಿ ನೆರೆ, ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಇನ್ನು ಇಲ್ಲಿ ಮುಂಗಾರು ಮಳೆ ಜೂನ್ 9ಕ್ಕೆ ಆಗಮಿಸಿತ್ತು.
ಜೂನ್ 13 ಮತ್ತು 14ರಂದು ಮುಂಬೈಯಲ್ಲಿ ತೀವ್ರ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅಗ್ನಿ ಶಾಮಕ ದಳ, ವಿಪತ್ತು ನಿರ್ವಹಣಾ ದಳಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ತುರ್ತು ಆಶ್ರಯ ತಾಣಗಳನ್ನು ಮುಂಬೈಯಲ್ಲಿ ಶಿಕ್ಷಣ ಇಲಾಖೆ ತೆರೆಯುತ್ತಿದೆ. ವಸತಿ ಪ್ರದೇಶಗಳನ್ನು ಮಿತಿ ನದಿಯ ಹತ್ತಿರ ಬೃಹನ್ ಮುಂಬೈ ಮಹಾನಗರ ಪಾಲಿಕೆ ಗುರುತಿಸಿದ್ದು ಪರಿಸ್ಥಿತಿ ಕೈಮೀರಿ ಹೋದರೆ ಜನರನ್ನು ಈ ಆಶ್ರಯ ತಾಣಗಳಿಗೆ ವರ್ಗಾಯಿಸಲಾಗುತ್ತದೆ. ಎನ್ ಡಿಆರ್ ಎಫ್, ಕರಾವಳಿ ಪಡೆ ಮತ್ತು ನೌಕಾಪಡೆ ಜೊತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸಮನ್ವಯ ಸಾಧಿಸುತ್ತಿದೆ. ಅಗತ್ಯಬಿದ್ದರೆ ಈ ಪಡೆಗಳು ಸಹಕಾರ ನೀಡಲಿವೆ ಎಂದು ಪಾಲಿಕೆ ಹೇಳಿಕೆಯಲ್ಲಿ ತಿಳಿಸಿದೆ.
ಚರಂಡಿ ಮತ್ತು ಕಾಲುವೆಗಳ ಮೇಲೆ ಕಸಗಳನ್ನು,ಬೇಡದ ವಸ್ತುಗಳನ್ನು ಬಿಸಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಕಿಶೋರಿ ಕಿಶೋರ್ ಪಡ್ನೇಕರ್ ತಿಳಿಸಿದ್ದಾರೆ.