ಕೀವ್: ಉಕ್ರೇನ್ನಿಂದ ಹೊರಟ ಮೊದಲ ಬ್ಯಾಚ್ ಸುಸೇವಾ ಗಡಿ ದಾಟುವ ಮೂಲಕ ರೊಮೇನಿಯಾ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಕೀವ್ನಲ್ಲಿರುವ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಸಿಕ್ಕಿರುವ ಭಾರತೀಯರನ್ನು ರೊಮೇನಿಯಾ ಹಾಗೂ ಹುಂಗರಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಕಿರು ವಿಡಿಯೋದಲ್ಲಿ ಸುಸೇವಾ ಗಡಿ ಕ್ರಾಸಿಂಗ್ನಲ್ಲಿರುವ ತನ್ನ ತಂಡವು ಭಾರತಕ್ಕೆ ಹಿಂದಿರುಗಲು ಬುಚಾರೆಸ್ಟ್ಗೆ ತೆರಳಿದರೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.ನಾವು ಗಡಿಯಲ್ಲಿರುವ ಭಾರತೀಯರನ್ನು ನೆರೆಯ ದೇಶಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಲಾಗಿದೆ.
ಉಕ್ರೇನ್ನಲ್ಲಿ ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಶುಕ್ರವಾರ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ಗೆ ಎರಡು ವಿಮಾನಗಳನ್ನು ಕಳುಹಿಸಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಲ್ಲಿರುವ 470ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರೊಮೇನಿಯಾ ಮೂಲಕ ಭಾರತಕ್ಕೆ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಯುದ್ಧ ಪೀಡಿತ ದೇಶದಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ರಕ್ಷಿಸುವಂತೆ ಎಲ್ಲೆಡೆಯಿಂದ ಮೊರೆ ಕೇಳಿಬರುತ್ತಿದ್ದು, ಹತಾಶೆ ಹೆಚ್ಚುತ್ತಿದೆ.
ಯುದ್ಧ ಆರಂಭಕ್ಕೆ ಮುನ್ನವೇ ಉಕ್ರೇನ್ನಿಂದ ವಾಪಸಾಗುವಂತೆ ಅಲ್ಲಿರುವ ಭಾರತೀಯ ಪ್ರಜೆಗಳಿಗೆ ಜನವರಿ ಎರಡನೇ ವಾರ ಹಾಗೂ ಫೆಬ್ರುವರಿ ಮೊದಲ ವಾರದಲ್ಲಿಯೇ ಸೂಚನೆ ನೀಡಲಾಗಿತ್ತು.
ಅಂದಾಜು 20,000 ಭಾರತೀಯರು ಉಕ್ರೇನ್ನಲ್ಲಿ ಇರುವ ಮಾಹಿತಿ ಲಭಿಸಿದೆ. ಆ ಪೈಕಿ 18,000 ವಿದ್ಯಾರ್ಥಿಗಳಾಗಿದ್ದಾರೆ. ಈವರೆಗೆ ಒಟ್ಟು 4,000 ಜನ ವಾಪಸಾಗಿದ್ದು, ಅಲ್ಲಿಯೇ ಇರುವ 16,000 ಜನ ಸುರಕ್ಷಿತವಾಗಿದ್ದಾರೆ.
ಯುದ್ಧ ಭಯದಿಂದ ಉಕ್ರೇನ್ನ ಬಹುತೇಕ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಬಂದ್ ಆಗಿದ್ದು, ನೆರೆಯ ರೋಮಾನಿಯಾ, ಸ್ಲೋವಾಕಿಯಾ, ಪೋಲೆಂಡ್ ಹಾಗೂ ಹಂಗೇರಿ ದೇಶಗಳ ಗಡಿಗಳಿಗೆ ಭಾರತೀಯರನ್ನು ರಸ್ತೆ ಮೂಲಕ ಕರೆತಂದು, ಅಲ್ಲಿಂದ ವಿಮಾನದಲ್ಲಿ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 1,000 ಜನ ರೋಮಾನಿಯಾ ಗಡಿ ತಲುಪಿದ್ದು, ಶನಿವಾರ ಬೆಳಿಗ್ಗೆ ಅಲ್ಲಿಂದ ಹೊರಡಲಿರುವ ಎರಡು ವಿಮಾನಗಳು ಅವರನ್ನು ಹೊತ್ತು ಮುಂಬಯಿ ಹಾಗೂ ಹೊಸದಿಲ್ಲಿಗೆ ಬರಲಿವೆ, ಎಂದು ಅವರು ಹೇಳಿದರು.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಮೂಲದ 16,000 ಜನರು ಸುರಕ್ಷಿತವಾಗಿದ್ದು, ಅವರ ಕುಟುಂಬ ಸದಸ್ಯರು ಆತಂಕಪಡುವ ಅಗತ್ಯವಿಲ್ಲಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ರಷ್ಯಾ ಇದುವರೆಗೂ ಉಕ್ರೇನ್ನಲ್ಲಿನ ನಾಗರಿಕ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿಲ್ಲ. ಮುಂದೆ ದಾಳಿ ನಡೆಯುವ ಸಾಧ್ಯತೆ ಇಲ್ಲಎಂಬ ಭರವಸೆ ದೊರೆತಿದೆ ಎಂದು ತಿಳಿಸಿದ್ದಾರೆ.