Bengaluru 19°C

ಒಲಿಂಪಿಕ್ಸ್​ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಪ್ರಕಾಶ್ ಪಡುಕೋಣೆ ಕಿಡಿ

Prakash

ಪ್ಯಾರಿಸ್​: ಈ ಬಾರಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ಭರವಸೆಯ ಆಟಗಾರನಾಗಿದ್ದ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಪದಕದ ಆಸೆಯೂ ಅಂತ್ಯಗೊಂಡಿದೆ. ಈ ಬಾರಿ ಬ್ಯಾಡ್ಮಿಂಟನ್​ನಿಂದ ಭಾರತಕ್ಕೆ ಅಧಿಕ ಪದಕಗಳನ್ನು ಗೆಲ್ಲುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.


ಆದರೆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ಪಿವಿ ಸಿಂಧು ಸೇರಿದಂತೆ ದೇಶದ ಟಾಪ್​ ಮೋಸ್ಟ್​ ಶಟ್ಲರ್​ಗಳು ಈ ಬಾರಿ ಪದಕ ಗೆಲ್ಲಲು ವಿಫಲವಾಗಿದ್ದು, ಆಟಗಾರರ ಈ ನೀರಸ ಪ್ರದರ್ಶನಕ್ಕೆ ಬ್ಯಾಡ್ಮಿಂಟನ್​ ದಂತಕಥೆ ಪ್ರಕಾಶ್​ ಪಡುಕೋಣೆ ಮಾತನಾಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.


33ನೇ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಭಾರತ ಈವರೆಗೂ ಮೂರು ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದು, ಈ ಮೂರು ಪದಕಗಳು ಶೂಟಿಂಗ್ ವಿಭಾಗದಲ್ಲಿ ಬಂದಿದೆ. 2008ರ ನಂತರ ಇದೇ ಮೊದಲ ಬಾರಿಗೆ ಭಾರತದ ಶಟ್ಲರ್‌ಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿರುವುದು. 2012 ರ ಒಲಿಂಪಿಕ್ಸ್‌ನಲ್ಲಿ, ಸೈನಾ ನೆಹ್ವಾಲ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್​ನಲ್ಲಿ ದೇಶಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದರು.


ಆ ಬಳಿಕ ಪಿವಿ ಸಿಂಧು ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡಕ್ಕಿಂತ ಹೆಚ್ಚು ಪದಕಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯೆಲ್ಲವೂ ಈಗ ಹುಸಿಯಾಗಿದೆ.


Nk Channel Final 21 09 2023