ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಾರದ ಹಿಂದೆಯಷ್ಟೇ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ರಾಯುಡು ಒಂದೇ ವಾರದೊಳಗೆ ವೈಎಸ್ಆರ್ ಪಕ್ಷವನ್ನು ತೊರೆದು ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಆದರೀಗ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಸಿದ್ಧಾಂತ ಮತ್ತು ವೈಎಸ್ಆರ್ಸಿಪಿಯ ಸಿದ್ಧಾಂತಗಳು ಹೊಂದಾಣಿಕೆಯಾಗಿಲ್ಲ. ಹೀಗಾಗಿ ವೈಎಸ್ಆರ್ಸಿಪಿಯೊಂದಿಗೆ ಮುಂದುವರೆಯಲು ಸಾಧ್ಯವಾಗಿಲ್ಲ. ಇದಕ್ಕೂ ಚುನಾವಣೆಗೆ ಸ್ಪರ್ಧಿಸುವುದಕ್ಕೂ ಮತ್ತು x ಮತ್ತು y ಸ್ಥಾನಕ್ಕೂ ಖಂಡಿತವಾಗಿಯೂ ಯಾವುದೇ ಸಂಬಂಧವಿಲ್ಲ ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ.
ನಾನು ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ಆದರೆ ನನ್ನ ಹಿತೈಷಿಗಳು ಮತ್ತು ಆಪ್ತರು ಮತ್ತು ಕುಟುಂಬದವರು ಪವನ್ (ಪವನ್ ಕಲ್ಯಾಣ್) ಅಣ್ಣನ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳಲು ಒಮ್ಮೆ ಭೇಟಿಯಾಗುವಂತೆ ನನಗೆ ಹೇಳಿದ್ದರು. ಅದರಂತೆ ನಾನು ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಸಾಕಷ್ಟು ಸಮಯ ಕಳೆದಿದ್ದೇನೆ. ರಾಜಕೀಯ ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದು, ಅವರ ಸಿದ್ಧಾಂತ ಮತ್ತು ರಾಜಕೀಯ ದೃಷ್ಟಿಕೋನವು ನನ್ನಂತೆಯೇ ಇದೆ ಎಂಬುದು ಸಂತೋಷದ ವಿಷಯ. ಸದ್ಯ ನಾನು ಕ್ರಿಕೆಟ್ ಆಡಲು ದುಬೈಗೆ ಹೋಗುತ್ತಿದ್ದೇನೆ. ಅಲ್ಲದೆ ಸದಾ ಆಂಧ್ರಪ್ರದೇಶದ ಜನರ ಜೊತೆ ನಿಲ್ಲುತ್ತೇನೆ ಎಂದಿದ್ದಾರೆ.