ಬೆಂಗಳೂರು: ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನದ ಚೆಕ್ಗಳನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಬುಧವಾರ ಮಕ್ಕಳಿಗೆ ವಿತರಿಸಿದರು. ದುರ್ಬಲ ವರ್ಗದ ಸುಮಾರು 10,000 ಪ್ರತಿಭಾನ್ವಿತ ಮಕ್ಕಳಿಗೆ ತಲಾ 10,000 ರೂ.ಗಳ ಶಿಷ್ಯವೇತನವನ್ನು ನೇರವಾಗಿ ಮಕ್ಕಳ ಶಾಲೆಗಳಿಗೆ ಪಾವತಿಸುವ ಗುರಿಯನ್ನು ಸೂರ್ಯ ಹೊಂದಿದ್ದಾರೆ.
ಪ್ರಸ್ತುತ ಬೆಂಗಳೂರು ದಕ್ಷಿಣದಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ದೇವೇಗೌಡರು ನಗರದ ಆಟೋ ರಿಕ್ಷಾ ಚಾಲಕರ ಮಕ್ಕಳು ಸೇರಿದಂತೆ ಸುಮಾರು 10 ಮಕ್ಕಳಿಗೆ ವಿದ್ಯಾರ್ಥಿವೇತನ ಚೆಕ್ಗಳನ್ನು ಹಸ್ತಾಂತರಿಸಿದರು. ದೇವೇಗೌಡ ಸರ್ ಅವರಂತಹ ಉನ್ನತ ಮಟ್ಟದ ವ್ಯಕ್ತಿಯಿಂದ ಚೆಕ್ ಪಡೆದಿರುವುದು ಅನೇಕ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಕ ಅನುಭವವಾಗಿದೆ, ಈ ಮಕ್ಕಳಿಗೆ ಚೆಕ್ ನೀಡಲು ಒಪ್ಪಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಕಾರ್ಯಕ್ರಮದ ಬಳಿಕ ಸೂರ್ಯ ಹೇಳಿದರು. ದೇವೇಗೌಡರು ತಮ್ಮ ರಾಜಕೀಯದಲ್ಲಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಾರೆ ಎಂದರು. ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಂಸದ ಸೂರ್ಯ ದೇವೆಗೌಡರಿಗೆ ವಿವರಿಸಿದರು.
ನಗರದ ಅಭಿವೃದ್ಧಿಯ ವಿವಿಧ ಅಂಶಗಳ ಬಗ್ಗೆಯೂ ಚರ್ಚಿಸಿದರು. ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ದೇವೆಗೌಡ ಅವರಿಗೆ ವಿವರಿಸಿದರು.