ಉಡುಪಿ: ಉಡುಪಿ ಪುತ್ತಿಗೆ ಮಠದ ಅಧೀನದಲ್ಲಿರುವ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಫೆ. 1ರಂದು ನೂತನ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4ಗಂಟೆಗೆ ಕೃಷ್ಣಮಠದಿಂದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರು ಚಾಲನೆ ನೀಡಲಿದ್ದಾರೆ. ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಉಪಸ್ಥಿತರಿರುವರು ಎಂದರು.
ಸಂಜೆ 6ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥರು ವಹಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 20 ಲಕ್ಷ ರೂ. ವೆಚ್ಚದ ನೂತನ ರಥವನ್ನು ಕೋಟೇಶ್ವರದ ಪರಮೇಶ್ವರ ಆಚಾರ್ಯ ನಿರ್ಮಿಸಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿತೋಷ್ ಆಚಾರ್ಯ, ಉದ್ಯಮಿ ವಿಜಯರಾಘವ ರಾವ್, ರಮೇಶ್ ಭಟ್ ಉಪಸ್ಥಿತರಿದ್ದರು.