Bengaluru 24°C

ಉಡುಪಿಯಲ್ಲಿ ಇಲ್ಲಿಯವರೆಗೂ ಯಾವ ಶಾಸಕರು ದ್ವೇಷದ ರಾಜಕಾರಣ ಮಾಡಿಲ್ಲ; ಶಾಸಕ ಯಶ್ ಪಾಲ್ ವಿರುದ್ಧ ರಘುಪತಿ ಭಟ್ ಗರಂ

ಉಡುಪಿಯಲ್ಲಿ ಇಲ್ಲಿಯವರೆಗೂ ಯಾವ ಶಾಸಕರು ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಯು.ಆರ್.ಸಭಾಪತಿ, ಪ್ರಮೋದ್ ಮಧ್ವರಾಜ್ ಅವರನ್ನು ರಾಜಕೀಯವಾಗಿ ಎದುರಿಸಿಕೊಂಡು ಬಂದಿದ್ದೇನೆ.

ಉಡುಪಿ: ಉಡುಪಿಯಲ್ಲಿ ಇಲ್ಲಿಯವರೆಗೂ ಯಾವ ಶಾಸಕರು ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಯು.ಆರ್.ಸಭಾಪತಿ, ಪ್ರಮೋದ್ ಮಧ್ವರಾಜ್ ಅವರನ್ನು ರಾಜಕೀಯವಾಗಿ ಎದುರಿಸಿಕೊಂಡು ಬಂದಿದ್ದೇನೆ. ನಾವೆಲ್ಲ ರಾಜಕೀಯವಾಗಿ ಜಗಳ ಮಾಡುತ್ತಿದ್ದೆವು. ಆದರೆ ನಾವು ಯಾರೂ ವೈಯಕ್ತಿಕವಾಗಿ ನಿಂದನೆ ಹಾಗೂ ವ್ಯವಹಾರಕ್ಕೆ ತೊಂದರೆ ಮಾಡುತ್ತಿರಲಿಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.


ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದರ ಬಗ್ಗೆ ನೂರಕ್ಕೆ ನೂರರಷ್ಟು ಬೇಸರವಿದೆ. ಅವರ ದ್ವೇಷದ ರಾಜಕಾರಣ ಉಡುಪಿಗೆ ಒಳ್ಳೆದಲ್ಲ. ನಾನು ವಿಧಾನ ಪರಿಷತ್ ಚುನಾವಣೆಗೆ ನಿಲ್ಲುಲು ದ್ವೇಷದ ರಾಜಕಾರಣ ಮುಖ್ಯ ಕಾರಣ. ಟ್ರಾಫಿಕ್ ಯೋಜನೆಯನ್ನು ನನ್ನ ಯೋಜನೆ ಎಂಬ ಕಾರಣಕ್ಕೆ ನಿಲ್ಲಿಸಿದ್ದಾರೆ. ಯಾವುದೇ ಕೃತಜ್ಞತೆ ಇರುವ ವ್ಯಕ್ತಿ ಈ ರೀತಿ ಮಾಡಲ್ಲ. ಕಾಪು ಶಾಸಕ ಸುರೇಶ್ ಶೆಟ್ಟಿ ಮಾಜಿ‌ ಶಾಸಕ ಲಾಲಾಜಿ ಮೆಂಡರ್ ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ನಾನು ಪಕ್ಷದಲ್ಲಿ ಇರುವಾಗ ಯಶ್ಪಾಲ್ ಸುವರ್ಣ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ನನ್ನ ವೈಯಕ್ತಿಕ ನಿಂದನೆ ಮತ್ತು ವ್ಯವಹಾರಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಯಶ್ ಪಾಲ್ ಸುವರ್ಣರ ಬೆಳವಣಿಗೆಯಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುವುದು ಉಡುಪಿಯ ಜನತೆಗೆ ಗೊತ್ತಿದೆ. 2004ರಲ್ಲಿ ನಾನು ಚುನಾವಣೆ ಸ್ಪರ್ಧಿಸಿದಾಗ ಬಂಡಾಯ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರಿಗೆ ಯಶ್ ಪಾಲ್ ಸುವರ್ಣ ಬೆಂಬಲಿಸಿದ್ದರು. ಆದರೆ ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದಾಗ ಬೆಂಬಲ ನೀಡಿ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೆ. ಬಳಿಕ ನಗರಸಭೆ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಎರಡು ಬಾರಿ ನಗರಸಭೆ ಸದಸ್ಯನಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟೆ. ಅವರನ್ನು ಮೀನು ಮಾರಾಟ ಫೆಡರೇಶನ್ ಗೆ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡಿರುವುದು ನಾನು. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಮಾಡಿದ್ದೆ. ಅವರ ಮೇಲೆ ವಿಶ್ವಾಸ ಇಟ್ಟುಕೊಂಡು ಪ್ರೀತಿಯಿಂದ ಬೆಳೆಸಿದ್ದೆ. ಅವರು ವಿಧಾನಸಭಾ ಚುನಾವಣೆ ಸ್ಪರ್ಧಿಸಿದಾಗ 40 ದಿನಗಳ ಕಾಲ ಅವರೊಂದಿಗೆ ಕೆಲಸ ಮಾಡಿದ್ದೆ ಎಂದರು.


ಇವತ್ತು ನಾನು ಬಿಜೆಪಿ ತೊರೆದು ಪಕ್ಷೇತರನಾಗಿ ಸ್ಪರ್ಧಿಸಲು ಯಶ್ಪಾಲ್ ಅವರೇ ಕಾರಣ. ಇವರಿಂದ ನನಗೆ ಮಾನಸಿಕ ಆಘಾತ ಆಗಿರುವುದಲ್ಲದೆ, ಮನಸ್ಸಿಗೆ ತುಂಬಾ ಬೇಸರ ಆಗಿದೆ. ಬಿಜೆಪಿಯ ಬೆಳವಣಿಗೆಯಲ್ಲಿ ನನ್ನ ಪಾತ್ರ ಕೂಡ ಇದೆ. ಮೂರು ಬಾರಿ ಶಾಸಕನಾಗಿದ್ದ ನನ್ನನ್ನು ಅವರು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.
ಶಾಸಕರು ನನ್ನ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ. ಇದು ಸಜ್ಜನ ಶಾಸಕರ ಲಕ್ಷ್ಮಣವಲ್ಲ. ಈ ರೀತಿ ವರ್ತನೆ ಸರಿಯಲ್ಲ. ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆಯೂ ಇದೆ. ಮನುಷ್ಯ ಇಷ್ಟು ಕೃತಘ್ನನಾಗಬಾರದು. ಕೃತಜ್ಞತೆ ಸ್ವಲ್ಪ ಆದರೂ ಇರಬೇಕು. ಉಡುಪಿಯ ರಾಜಕಾರಣದಲ್ಲಿ ಇತಂಹ ರಾಜಕರಾಣ ಇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ನನ್ನ ಅವಧಿಯಲ್ಲಿನ ಯೋಜನೆಗಳಿಗೆ ಇವರು ರಾಜಕೀಯ ಕಾರಣಕ್ಕಾಗಿ ತಡೆಯೊಡ್ಡುತ್ತಿರುವುದರಿಂದ ಉಡುಪಿಯ ಅಭಿವೃದ್ಧಿಗೆ ಬಹಳ ದೊಡ್ಡ ತೊಡಕಾಗಿದೆ ಎಂದ ರಘುಪತಿ ಭಟ್, ಮಹಾಲಕ್ಷ್ಮೀ ಬ್ಯಾಂಕಿಗೆ ಸಂಬಂಧಿಸಿ ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದೇನೆಯೇ ಹೊರತು ಶಾಸಕರ ಬಗ್ಗೆ ಆರೋಪ ಮಾಡಿಲ್ಲ. ಅದು ಕೂಡ ಮಾಡಬಾರದು ಅಂದರೆ ಪಾಳೇಗಾರಿಕೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ನನ್ನ ಸೊಸೈಟಿಯ ಬಗ್ಗೆ ವಿಧಾನಸಭೆಯಲ್ಲಿ ವಿವಾದ ಮಾಡಿದರು ಎಂದು ದೂರಿದರು.


ಬಿಜೆಪಿ ಕರೆದರೆ ಪಕ್ಷ ಸೇರ್ಪಡೆಯಾಗಲು ತಯಾರಿದ್ದೇನೆ. ಆದರೆ ಬಿಜೆಪಿ ನಾಯಕರು ಕರೆದಿಲ್ಲ, ನನ್ನ ಹತ್ತಿರ ಮಾತು ಕೂಡ ಆಡಿಲ್ಲ. ಈಗ ನನ್ನ ಅವಶ್ಯಕತೆ ಅವರಿಗೆ ಇಲ್ಲ ಅನಿಸಿರಬೇಕು. ಹೀಗಾಗಿ ನನ್ನಷ್ಟಕ್ಕೆ ನಾನು ಇದ್ದೇನೆ. ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಪಕ್ಷದವರನ್ನು ಭೇಟಿಯಾಗಿಲ್ಲ‌. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡ್ತಾನೆ. ಮುಂದಿನ ಒಂದು ಅವಧಿಗೆ ಚುನಾವಣೆಗೆ ನಿಲ್ಲಬೇಕೆಂದು ತೀರ್ಮಾನ ಮಾಡಿದ್ದೇನೆ. ಯಾವ ಪಕ್ಷದಲ್ಲಿ ನಿಲ್ಲಬೇಕೆಂಬುವುದನ್ನು ಆ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ. ಉಡುಪಿ ವಿಧಾನಸಭಾ ಕ್ಷೇತ್ರದ ಜನತೆ ಇಲ್ಲಿಯವರೆಗೂ ನನ್ನನ್ನು ಸೋಲಿಸಿಲ್ಲ. ಮೂರು ಬಾರಿ ನನ್ನನ್ನು‌ ಗೆಲ್ಲಿಸಿದ್ದಾರೆ ಎಂದರು.


Nk Channel Final 21 09 2023