ಉಡುಪಿ: ನಗರದ ಜೋಡುಕಟ್ಟೆಯಲ್ಲಿನ ಪ್ರಾರ್ಥನ ಮಂದಿರದಲ್ಲಿ ಮತಾಂತರ ಮಾಡಲಾಗುತ್ತಿದ್ದು, ಇಲ್ಲಿ ಹೆಚ್ಚುವರಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸದಸ್ಯ ವಿಜಯ ಕುಮಾರ್ ಕೊಡವೂರು ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಈ ಪ್ರಾರ್ಥನಾ ಮಂದಿರವು ನಗರಸಭೆ ದಾಖಲೆಯಲ್ಲಿ ಇಂಡಿಯ ಪೆಂಟಕೋಸ್ಟ್ ಚರ್ಚ್ ಎಂಬುದಾಗಿ ನಮೂದಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ದಾಖಲೆಯನ್ನು ತಿದ್ದಿ ಮನೆಯನ್ನು ಚರ್ಚ್ ಎಂಬುದಾಗಿ ಮಾಡಲಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ದೂರಿದರು.
ಈ ರೀತಿ ಮಾಡಿದರೆ ಉಡುಪಿಯ ಜನತೆ ಸುಮ್ಮನೆ ಇರಲು ಆಗಲ್ಲ ಎಂದು ಶಾಸಕರು ಎಚ್ಚರಿಸಿದರು. ಇದರ ವಿರುದ್ಧ ಕ್ರಮ ಜರಗಿಸದಿದ್ದರೆ ಕೋರ್ಟ್ ಮೊರೆ ಹೋಗಲಾಗುವುದು ಎಂದು ಸದಸ್ಯ ಕೃಷ್ಣರಾವ್ ಕೊಡಂಚ ಎಚ್ಚರಿಕೆ ನೀಡಿದರು. ಚರ್ಚ್ಗೆ ಸಂಬಂಧಿಸಿ ದಾಖಲೆಗಳನ್ನು ಅಧ್ಯಕ್ಷರ ಸಮ್ಮುಖದಲ್ಲಿ ಒಂದು ವಾರದೊಳಗೆ ಪರಿಶೀಲಿಸಲಾಗುವುದು ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.