ಶಿರೂರು: ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ನೀರಿಗೆ ಇಳಿದು ಅರ್ಜುನ್ಗಾಗಿ ಹುಡುಕಾಡಿದರು.
ಕೊಟ್ಟ ಮಾತಿಗೆ ತಪ್ಪದ ಈಶ್ವರ್ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಶುಕ್ರವಾರದಂದು ಈಶ್ವರ್ ಮಲ್ಪೆ ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿಯೊಂದನ್ನು ಪತ್ತೆಹಚ್ಚಿ ತೆಗೆದುಕೊಂಡು ದಡಕ್ಕೆ ಬಂದಿದ್ದರು. ಆದರೀಗ ಈ ಸಾಮಾಗ್ರಿ ಅರ್ಜುನ್ ಲಾರಿಯದ್ದಲ್ಲ ಎಂಬ ಸತ್ಯ ಹೊರಬಿದ್ದಿದೆ. ಲಾರಿ ಮಾಲೀಕ ಇದು ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ.
ಲಾರಿ ಸಾಮಾಗ್ರಿ ಪತ್ತೆಯಾದಾಗಿನಿಂದ ಸ್ಥಳೀಯರಿಗೆ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ನೀರಿನಡಿಯಲ್ಲಿ ಮತ್ತೊಂದು ಲಾರಿ ಇದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನು ಶಿರೂರು ಗುಡ್ಡ ಕುಸಿತದಲ್ಲಿ 3 ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿತ್ತು. ಆ ಮೂರರಲ್ಲಿ ಒಂದು ಲಾರಿಯ ಸಾಮಾಗ್ರಿ ಇದಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಈ ಸಾಮಾಗ್ರಿ ಹಲವು ಅನುಮಾನಗಳಿಗೆ ಕಾರಣವಾಗಿದೆ.