ನಂಜನಗೂಡು: ಹತ್ತೂರ ಜಾತ್ರೆಗೆ ಸುತ್ತೂರು ಜಾತ್ರೆ ಸಮ ಎಂಬ ನಾಣ್ಣುಡಿಯಂತೆ ಸುತ್ತೂರು ಜಾತ್ರೆ ಜನಜಾಗೃತಿ ಯಾತ್ರೆ ಎಂದೆ ಪ್ರಸಿದ್ಧಿ ಪಡೆದಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ.26 ರಿಂದ 31ರವರೆಗೆ 10 ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಶಿವಕುಮಾರ್ ಹಾಗೂ ಮಹಾ ದಾಸೋಹದ ಮುಖ್ಯಸ್ಥರಾದ ಬೊಕ್ಕಳ್ಳಿ ಸುಬ್ಬಪ್ಪ ತಿಳಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಸುತ್ತೂರು ಮಠದ ಶ್ರೀ ಕ್ಷೇತ್ರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.26 ರಂದು ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯಾಗಲಿದ್ದು, ಆದಿ ಚುಂಚನಗಿರಿ ಶ್ರಿ ನಿರ್ಮಲಾನಂದನಾಥ ಶ್ರೀಗಳು, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಶ್ರೀಗಳ ದಿವ್ಯ ಸಾನಿಧ್ಯದೊಂದಿಗೆ ಹಲವು ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಲಾಗುತ್ತದೆ.
ಜ.27 ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 155 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಇದುವರೆಗೆ ಶ್ರೀಕ್ಷೇತ್ರದಲ್ಲಿ 3700 ಜೋಡಿಗಳಿಗೆ ವಿವಾಹವಾಗಿವೆ. ಜ.28 ರಂದು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ರಥೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಜ.29 ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, ಹಾಗೂ ಲಕ್ಷ ದೀಪೋತ್ಸವ, ಜ.30 ರಂದು ತೆಪ್ಪೋತ್ಸವ, ಜ.31 ರಂದು ಅನ್ನ ಬ್ರಹ್ಮೋತ್ಸವದ ಮೂಲಕ ಸಂಪನ್ನವಾಗಲಿದೆ.
ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸದಲ್ಲಿ ಭಜನಾ ಮೇಳ, ಧನಗಳ ಜಾತ್ರೆ, ವಸ್ತು ಪ್ರದರ್ಶನ, ಕೃಷಿಮೇಳ, ಚಿತ್ರಸಂತೆ, ಕುಸ್ತಿ ಪಂದ್ಯಾವಳಿ, ಗ್ರಾಮೀಣ ಜನತೆಗಾಗಿ ದೇಶಿ ಆಟಗಳು, ನಾಟಕ ಪ್ರದರ್ಶನ, ಕಲಾತಂಡಗಳ ಪ್ರದರ್ಶನ ,ರಸಪ್ರಶ್ನೆ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳು. ಜರುಗಲಿವೆ. ಒಂದು ವಾರಗಳ ಕಾಲ ನಡೆವ ಜಾತ್ರಾ ಮಹೋತ್ಸವಕ್ಕೆ 15 ರಿಂದ 20 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ.
ಆರು ದಿನಗಳ ಕಾಲ ಮಹಾ ದಾಸೋಹಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಉಗ್ರಾಣದಲ್ಲಿ ಈಗಾಗಲೇ 1 ಸಾವಿರ ಕ್ವಿಂಟಾಲ್ ಅಕ್ಕಿ, 250 ಕ್ವಿಂಟಾಲ್ ಬೇಳೆ, 200 ಕ್ವಿಂಟಾಲ್ ಸಕ್ಕರೆ, 1500 ಸಾವಿರ ಟಿನ್ ಅಡುಗೆ ಎಣ್ಣೆ 10 ಸಾವಿರ ಕೆ.ಜಿ ತುಪ್ಪ ಸೇರಿಸಿ ಎಲ್ಲಾ ಅಡುಗೆ ದಾಸ್ತಾನು ಸಂಗ್ರಹ ಮಾಡಲಾಗಿದೆ ಎಂದು ಜಾತ್ರಾ ಮಹೋತ್ಸದ ಸಂಪೂರ್ಣ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಶಿವಕುಮಾರ್, ಉದಯಕುಮಾರ್, ಮಹಾ ದಾಸೋಹದ ಮುಖ್ಯಸ್ಥ ಸುಬ್ಬಪ್ಪ ಹಾಜರಿದ್ದರು.