ನಂಜನಗೂಡು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ. ರಾಜ್ಯದ ದೊರೆ ಸಿದ್ದರಾಮಯ್ಯರವರೇ ಇದೇನಾ ನಿಮ್ಮ ಸಮಾಜಿಕ ನ್ಯಾಯ ಎಂದು ಬಿಜೆಪಿ ಪಕ್ಷದ ನಗರ ಅಧ್ಯಕ್ಷ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ತಾಲ್ಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ಬೀದಿಪಾಲಾಗಿರುವ ಹಂದಿ ಜೋಗಿ ಕುಟುಂಬಕ್ಕೆ ಬಿಜೆಪಿ ನಗರ ಅಧ್ಯಕ್ಷ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನ್ಯ ಕೋಮಿನ ಭೂ ಒಡೆಯನ ದಬ್ಬಾಳಿಕೆ ಹಾಗೂ ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಗೂಂಡ ವರ್ತನೆಯಿಂದ ವಾಸದ ಗುಡಿಸಿಲನ್ನು ಧ್ವಂಸ ಮಾಡಿ ಸತತ ಮೂರು ದಿನಗಳಿಂದ ಬೀದಿಯಲ್ಲಿ ದಿನದೊಡುತ್ತಿರುವ ಹಂದಿ ಜೋಗಿ ಕುಟುಂಬದ ಮಹಿಳೆಯರು ಮಕ್ಕಳ ಹೀನಾಯ ಪರಿಸ್ಥಿತಿ ಮತ್ಯಾರಿಗೂ ಬೇಡ ರಾಜ್ಯದ ಮುಖ್ಯಮಂತ್ರಿಗಳ ತವರು ಕ್ಷೇತ್ರ ಎಂದುಕೊಳ್ಳುವುದಕ್ಕೆ ನಾಚಿಕೆಯ ಪರಿಸ್ಥಿತಿಯಾಗಿದೆ.
ಹಂದಿ ಜೋಗಿ ಕುಟುಂಬದ ವಾಸಿಗಳು ಗ್ರಾಮದ ಬಳಿಯ ಮುಖ್ಯರಸ್ತೆಯಲ್ಲಿ ಉತ್ತಮವಾಗಿ ಜೀವಿಸುತ್ತಿದ್ದಾರೆ ಎಂದು ಅವರ ಏಳಿಗೆಯನ್ನು ಸಹಿಸಿಕೊಳ್ಳಲಾಗದ ಹೊರಳವಾಡಿ ಹೊಸೂರು ಗ್ರಾಮದ ಶಿವಾನಂದ ಎಂಬುವರು ಸ್ಥಳೀಯ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದು ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಜೊತೆಗೂಡಿ ತಹಶೀಲ್ದಾರ್ ಅವರ ಗಮನಕ್ಕೆ ತಾರದೆ ಸತತ ಮೂರು ನಾಲ್ಕು ತಲೆಮಾರುಗಳಿಂದ ವಾಸಿಸುವ ಕುಟುಂಬಗಳನ್ನು ಏಕಾಏಕಿ ಬೀದಿಗೆ ತಳ್ಳಿರುವುದು ಅಕ್ಷಮ್ಯ ಅಪರಾಧ.
ಕೂಡಲೇ ಹಂದಿ ಜೋಗಿ ಕುಟುಂಬದ ಈ ವಿಚಾರವನ್ನು ಸಂಕ್ಷಿಪ್ತವಾಗಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರು ಮತ್ತು ಮಾಜಿ ಶಾಸಕರಾದ ಬಿ.ಹರ್ಷವರ್ಧನ್ ರವರ ಗಮನಕ್ಕೆ ತಂದು ತಾಲ್ಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ನಾವು ಸಜ್ಜಾಗುತ್ತೇವೆ. ಕೂಡಲೇ ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ಅವರನ್ನು ಅಮಾನತು ಮಾಡಬೇಕು ಹಾಗೂ ಜಮೀನಿನ ಮಾಲೀಕ ಶಿವಾನಂದ ಮತ್ತು ಪಿಎಸ್ಐ ವಿರುದ್ಧ ಎಸ್.ಸಿ , ಎಸ್ಟಿ ದೌರ್ಜನ್ಯ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮಹದೇವಪ್ರಸಾದ್, ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ಮುಳ್ಳೂರು ಸ್ವಾಮಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆಲತ್ತೂರು ಶಿವರಾಜ್, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಿದ್ದರಾಜು ಧೈರ್ಯ ತುಂಬಿದ್ದಾರೆ.