News Karnataka Kannada
Tuesday, April 30 2024
ಮೈಸೂರು

ಮೇ.7ರಂದು ಮೈಸೂರು ವ್ಯಾಪ್ತಿಯಲ್ಲಿ ಮೋದಿ ಕಡೇ ಪ್ರಚಾರ

PM Modi's last campaign in Mysuru on May 7
Photo Credit : By Author

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 7ರಂದು ನಂಜನಗೂಡು ತಾಲೂಕು ಎಲಚಗೆರೆ ಬೋರೆಯಲ್ಲಿ ತಮ್ಮ ಕೊನೆಯ ಚುನಾವಣೆ ಪ್ರಚಾರ ಮಾಡಲಿದ್ದು, ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್ ತಿಳಿಸಿದರು.

ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯ ಎಲಚಗೆರೆ ಬೋರೆ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಅಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಈ ಸಭೆಗೆ ನರೇಂದ್ರ ಮೋದಿ ಶಿವಮೊಗ್ಗದಿಂದ ನೇರವಾಗಿ ಬಂದು ಭಾಗವಹಿಸುವರು. ಸಮಾವೇಶ ನಡೆಯುವ ಸ್ಥಳದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಭೆಯ ನಂತರ ಮೋದಿ ನೇರವಾಗಿ ದೆಹಲಿಗೆ ತೆರಳುವರು ಎಂದರು.

ನಂಜನಗೂಡಿನಿಂದ 12 ಕಿಮೀ ಮತ್ತು ಗುಂಡ್ಲಪೇಟೆ ತಾಲೂಕಿನ ಬೇಗೂರಿಗೆ 4 ಕಿಮೀ ದೂರದಲ್ಲಿ ಎರಡೂ ತಾಲ್ಲೂಕು ಗಡಿಯಲ್ಲಿ ಎಲಚಗೆರೆ ಬೋರೆ ಇದ್ದು, ಸುಮಾರು 80 ರಿಂದ 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಈ ಪ್ರಚಾರ ಸಭೆಗೆ ಮೈಸೂರು ನಗರದ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳನ್ನು ಹೊರತು ಪಡಿಸಿ, ಮೈಸೂರು ಗ್ರಾಮಾಂತರದ 7 ಕ್ಷೇತ್ರಗಳು, ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರ ಸೇರಿದಂತೆ 11 ಕ್ಷೇತ್ರಗಳ ಜನರನ್ನು ಸಭೆಗೆ ನಮ್ಮ ಪಕ್ಷದ ಕಾರ್ಯಕರ್ತರು ಆಹ್ವಾನಿಸುತ್ತಿದ್ದಾರೆ. ಗುಂಡ್ಲುಪೇಟೆಯಿಂದ ಎರಡು ಸಾವಿರ ಮಂದಿ ಬೈಕ್‌ನಲ್ಲೇ ಬರುತ್ತಿದ್ದಾರೆ. ಈಗಾಗಲೇ ಎಸ್‌ಪಿಜಿ ಅವರ ಸೂಚನೆಯಂತೆ ಎಲ್ಲ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಎಲ್ಲಾ ಕಡೆಯೂ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. ಬಿಜೆಪಿ ಪರವಾಗಿ ಜನರಿದ್ದು, ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ವರುಣದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನಛಾಯೆ ಇದೆ. ಅವರು ಎಂದೂ ನಟರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸಿರಲಿಲ್ಲ. ಸೋಲಿನ ಭಯದಿಂದ ಮೊದಲ ಬಾರಿಗೆ ನಟರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸೋಮಣ್ಣ ಪರ ಎಲ್ಲಾ ಜನಾಂಗದವರಿದ್ದು, ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಕೃಷ್ಣರಾಜ, ಚಾಮರಾಜದ ಜತೆಗೆ ಚಾಮುಂಡೇಶ್ವರಿ ಮತ್ತು ಎನ್‌ಆರ್ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಬಿಜೆಪಿಯವರು ತಮ್ಮ ಸ್ವಾರ್ಥಕ್ಕೆ ಒಂದು ಸಮುದಾಯದ ಯುವಕನನ್ನು ಕೊಲೆ ಮಾಡಿ, ಈಗ ಅವರ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವು ಶಾಂತಿಪ್ರಿಯರಾಗಿದ್ದು, ಅಭಿವೃದ್ಧಿಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ಈ ಸಂಬಂಧ ನಾವು ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದೇವೆ. ವಿಶ್ವನಾಥ್ ಒಂದು ಕಾಲದಲ್ಲಿ ಬಿಜೆಪಿಯವರಾಗಿದ್ದರು. ಆದರೆ, ಸದ್ಯ ಅವರು ಪಕ್ಷದಲ್ಲಿಲ್ಲ. ಪಕ್ಷ ಅವರಿಗೆ ಸಾಕಷ್ಟು ನೀಡಿದೆ. ಆದರೂ ಅವರು ಏಕೆ ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್, ಸಹ ವಕ್ತಾರ ಕೇಬಲ್ ರಮೇಶ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು