ಮೈಸೂರು: ಸಾಕಷ್ಟು ಪ್ರತಿಭಾವಂತ ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಸೂಕ್ತ ವೇದಿಕೆ ಸಿಗುತ್ತಿಲ್ಲ. ಆದ್ದರಿಂದ ನಾವು ಬೆಳೆಯುವ ಜತೆಗೆ ಹೊಸ ಕಲಾವಿದರನ್ನು ಕರೆ ತಂದು ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸಿದರೆ ಕಲಾವಿದನಲ್ಲಿರುವ ಕಲೆ ಸಾರ್ಥಕವಾಗುತ್ತದೆ ಎಂದು ನಟ ಡಾಲಿ ಧನಂಜಯ್ ಹೇಳಿದರು.
ನಗರದ ಜೆಕೆ ಮೈದಾನದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಮೈಸೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಸಿನಿ ಸಂತೆ ಸಮಾರೋಪದಲ್ಲಿ ಅತ್ಯುತ್ತಮ ಕಿರು ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಹೊಸ ಪ್ರಯೋಗಗಳು, ನಿರ್ದೇಶನ, ಸಂಗೀತ ಸಾಹಿತ್ಯ ಇವೆಲ್ಲದಕ್ಕೂ ಮನ್ನಣೆ ನೀಡಲು ಸಿನಿ ಸಂತೆ ರೀತಿಯ ವಸ್ತುಪ್ರದರ್ಶನ ಉತ್ತಮ ವೇದಿಕೆ ಎಂದು ಶ್ಲಾಘಿಸಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಮೈಸೂರು ಕಲಾವಿದರ ತವರೂರು. ನಾಟಕ, ನೃತ್ಯ, ಗಾಯನ, ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಮೈಸೂರಿನ ಸಾಂಸ್ಕೃತಿಕ ಹಿರಿಮೆ ಶ್ರೀಮಂತಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಬೇಸಿಗೆ ಶಿಬಿರ ಆಯೋಜಿಸಿ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಚಿಂತನೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕ ರಂಜಿತ ಸುಬ್ರಹ್ಮಣ್ಯ, ಸಂಧ್ಯಾ ರಾಣಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ರೇಖಾ ಶ್ರೀನಿವಾಸ್, ನಿರೂಪಕ ಅಜಯ್ ಶಾಸ್ತ್ರಿ, ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ವನಮಾಲ, ಎಂ.ಎನ್.ಚೇತನ್ ಗೌಡ, ಮೋಹನ್, ಶ್ರೀನಾಥ್ ಇದ್ದರು.