ಮೈಸೂರು: ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದ್ದು, ಒಬ್ಬೊಬ್ಬರಿಗೆ 50 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ. ಆದರೆ, ಕಾಂಗ್ರೆಸ್ನ ಯಾವ ಶಾಸಕರು ಇದಕ್ಕೆ ಬಗ್ಗಿಲ್ಲ. 136 ಶಾಸಕರಿದ್ದರೂ ಬಿಜೆಪಿ ಸರ್ಕಾರ ಅಲುಗಾಡಿಸಲು ಪ್ರಯತ್ನ ಮಾಡುತ್ತಿದ್ದು, ಅವರಿಗೆ ಸರ್ಕಾರಗಳನ್ನು ಬೀಳಿಸುವುದು ಅಭ್ಯಾಸವಾಗಿ ಹೋಗಿದೆ. ನೇರವಾಗಿ ಅವರು ಯಾವತ್ತೂ ಚುನಾವಣೆ ಮಾಡಿಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರ ಅತಂತ್ರ ಮಾಡುವ ರೀತಿ ಕರ್ನಾಟಕದಲ್ಲೂ ನಡೆದಿರುವುದು ಸತ್ಯ ಎಂದರು.
ನೀತಿ ಆಯೋಗದ ವರದಿ ಗಮನಿಸಬೇಕು. ದೇಶದಲ್ಲಿ ಶೇ.5ರಷ್ಟು ಮಾತ್ರವೇ ಬಡತನ ಇದೆ ಎಂಬ ನೀತಿ ಆಯೋಗದ ಮಾಹಿತಿ ಸತ್ಯವೋ? ಅಸತ್ಯವೋ? ಎಂಬುದು ತಿಳಿಯಬೇಕಿದೆ. ಇದು ನೀತಿ ಆಯೋಗ ನೀಡಿರುವ ಸರ್ವೇ ರಿಪೋರ್ಟ್ ಅಲ್ಲ. ಒಂದೊಮ್ಮೆ ಶೇ.೫ ಬಡತನವಿದ್ದರೆ ಖುಷಿಯ ಸಂಗತಿ. ಆದರೆ, ಜನರ ಸಾಮಾಜಿಕ ಪರಿಸ್ಥಿತಿ ಗಮನಿಸಿದರೆ ಆ ರೀತಿ ಕಾಣುವುದಿಲ್ಲ. ಬಡತನದ ರೇಖೆಗಿಂತ ಕಡಿಮೆ ಇರುವ 82 ಸಾವಿರ ಕುಟುಂಬಕ್ಕೆ ಅಕ್ಕಿ ಕೊಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.