ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯ ಕೊಂಬಿಗೆ ಮೀನು ಹಿಡಿಯುವ ಬಲೆ ಸಿಲುಕಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಈ ಅಕ್ರಮದ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೀನುಬಲೆ ಸಿಲುಕಿ ನರಳುತ್ತಿರುವ ಜಿಂಕೆಯನ್ನು ಪತ್ತೆ ಮಾಡಿ ಅದರ ಕೊಂಬಿಗೆ ಸಿಲುಕಿರುವ ಮೀನುಗಾರಿಕೆ ಬಲೆ ತೆಗೆಯುವಂತೆ ಒತ್ತಾಯಿಸಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಕನಕೋಟೆ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ಮೀನಿನ ಬಲೆ ಸಿಲುಕಿ ಜಿಂಕೆ ಪರದಾಡುತ್ತಿರುವುದನ್ನು ಗಮನಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಬಿನಿ ಹಿನ್ನೀರಿನ ಸಮೀಪದಲ್ಲಿರುವ ಕುಪ್ಪೆ ಅರಣ್ಯದಲ್ಲಿ
ಈ ಜಿಂಕೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಮೀನುಗಾರಿಕೆ ಬಲೆಗಳಿಂದ ತೊಂದರೆ: ಬಂಡೀಪುರ ಮತ್ತು ನಾಗರಹೊಳೆ ಅರಣ್ಯದ ಸಮೀಪ ವಾಸಿಸುವ ಮೀನುಗಾರರು ಹೆಚ್ಚಾಗಿ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಬಲೆಗಳನ್ನು ಬೀಸುತ್ತಾರೆ.
ಕೆಲವೊಮ್ಮೆ, ಆ ಮೀನುಗಾರಿಕೆ ಬಲೆಗಳು ನೀರಿನಲ್ಲಿ ಉಳಿಯುತ್ತವೆ ಮತ್ತು ಅವುಗಳ ದಡ ಸೇರಿ ಕಾಡುಪ್ರಾಣಿಗಳಿಗೆ ಕಂಟಕವಾಗುತ್ತದೆ. ವನ್ಯಜೀವಿಗಳು ನೀರು ಕುಡಿಯುವುದಕ್ಕೆ ತೆರಳಿದ ವೇಳೆ ಪ್ರಾಣಿಗಳ ಕಾಲು, ಕುತ್ತಿಗೆ ಮತ್ತು ಕೊಂಬುಗಳಿಗೆ ಬಲೆ ಸಿಲುಕಿ ಪ್ರಾಣಕ್ಕೆ ಎರವಾಗುತ್ತದೆ. ಕೆಲವೊಮ್ಮೆ ಆನೆಗಳು ಕೂಡ ಈ ಮೀನುಗಾರಿಕೆ ಬಲೆಗಳನ್ನು ಬಿಡಿಸಿಕೊಳ್ಳಲು ಹರಸಾಹಸ ಪಡುತ್ತವೆ. 2021 ರಲ್ಲಿ, ಅರಣ್ಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೀನುಗಾರಿಕೆ ಬಲೆಯಲ್ಲಿ ಸಿಲುಕಿ ನೀರಿನಿಂದ ಹೊರಬರಲು ಸಾಧ್ಯವಾಗದ ಚಡಪಡಿಸುತ್ತಿದ್ದ ಆನೆಯನ್ನು ರಕ್ಷಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ತಿಳಿಸಿದ್ದಾರೆ.