ಪಿರಿಯಾಪಟ್ಟಣ: ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಮರಳುಕಟ್ಟೆ ಹಾಡಿಯಲ್ಲಿ ನಡೆದಿದ್ದು, ಅಕ್ರಮ ವಿದ್ಯುತ್ ಸಂಪರ್ಕ ನೀಡಿದವರ ವಿರುದ್ಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಡಗು ಗಡಿಭಾಗದಲ್ಲಿರುವ ಮರಳುಕಟ್ಟೆ ಹಾಡಿಯ ಗಿರಿಜನ ಮಣಿ ಬಿನ್ ಗೆಜ್ಜೆಮೇಸ್ತ್ರಿ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಜಮೀನಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂದು ಹೇಳಲಾಗಿದ್ದು, ಆಹಾರ ಅರಸಿಕೊಂಡು ಜಮೀನಿನತ್ತ ಬಂದ ಅಂದಾಜು 30ವರ್ಷ ಪ್ರಾಯದ ಗಂಡಾನೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ.
ಕಾಡಾನೆಯು ಸತ್ತು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹುಣಸೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಡಿ.ಎಸ್ ದಯಾನಂದ್, ಆರ್ಎಫ್ಒ ಸುಬ್ರಹ್ಮಣ್ಯ, ಡಿಆರ್ ಎಫ್ಓ ಪ್ರಸನ್ನ ಕುಮಾರ್ ಮತ್ತು ಸಿಬ್ಬಂದಿ, ಪಿರಿಯಾಪಟ್ಟಣ ಆರಕ್ಷಕ ಠಾಣೆ ಇನ್ಸ್ ಪೆಕ್ಟರ್ ಕೆ.ವಿ.ಶ್ರೀಧರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಬಳಿಕ ಚೆಸ್ಕಾಂ ಇಲಾಖೆಗೆ ಕಾಡಾನೆ ಅಕ್ರಮ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದು ಈ ಬಗ್ಗೆ ಪರಿಶೀಲನೆ ನಡೆಸುವಂತೆ ದೂರು ನೀಡಿದರ ಪರಿಣಾಮ ಚೆಸ್ಕಾಂ ಎಇಇ ಗುರುಬಸವರಾಜು ಮತ್ತು ವಿದ್ಯುತ್ ಪರಿವೀಕ್ಷಕ ಅಧಿಕಾರಿ ವೀಣಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆ ವಜ್ಯಜೀವಿ ಪಶುವೈದ್ಯ ಚೆಟ್ಟಿಯಪ್ಪ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಆನೆ ವಿದ್ಯುತ್ ಶಾಕ್ನಿಂದ ಮೃತಪಟಿರುವುದಾಗಿ ಧೃಡಿಕರಿಸಿದ್ಧಾರೆ. ಈ ಸಂಬಂಧ ಜಮೀನಿನ ಮಾಲೀಕ ಮಣಿ ಬಿನ್ ಗೆಜ್ಜೆಮೇಸ್ತ್ರಿ ಎಂಬುವರ ವಿರುದ್ಧ ಪೊಲೀಸ್ ಠಾಣೆಗೆ ಅರಣ್ಯ ಇಲಾಖೆ ದೂರು ನೀಡಿದೆ.