ಎಚ್.ಡಿ.ಕೋಟೆ: ತಾಲೂಕಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ಜನ ಮರಣ ಹೊಂದಿದ್ದರು ಸಹ ಪೋತಿ ಖಾತೆಗಳು ಆಗಿರುವುದಿಲ್ಲ, ಈಗ ಗ್ರಾಮವಾರು ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ, ಯರ್ಯಾರು ಇದುವರೆಗೂ ಪೌತಿ ಖಾತೆ ಮಾಡಿಸಿಕೊಂಡಿಲ್ಲ ರೈತರು ಪೌತಿ ಖಾತೆ ಸಂಬಂಧ ಅರ್ಜಿ ಮತ್ತು ಸೂಕ್ತ ದಾಖಲಾತಿಗಳನ್ನು ನೀಡಿ ಪೌತಿ ಖಾತೆ ಮಾಡಿಸಿಕೊಂಡು ನಿಮ್ಮ ನಿಮ್ಮ ಅಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದು ತಹಸೀಲ್ದಾರ್ ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನೇರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಇದುವರೆಗೆ ಒಟ್ಟು 5434 ಖಾತೆದಾರರು ಮರಣ ಹೊಂದಿರುತ್ತಾರೆ, ಆದರೂ ಇದುವರೆಗೂ ಪೌತಿ ಖಾತೆ ಮಾಡಿಸಿಕೊಂಡಿರುವುದಿಲ್ಲ, ಹೀಗಾಗಿ ತಾಲೂಕಿನಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ, ಪೌತಿ ಖಾತೆಗೆ ಸಂಬಂಧಪಟ್ಟಂತ ಎಲ್ಲ ದಾಖಲಾತಿಗಳನ್ನು ನಮ್ಮ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಸಂಗ್ರಹ ಮಾಡುತ್ತಿದ್ದಾರೆ, ಮೊದಲ ವಾರ ದಾಖಲಾತಿಗಳನ್ನು ಸಂಗ್ರಹಿಸಿ, ಎರಡನೇ ವಾರ ಪೌತಿ ಖಾತೆ ಆಂದೋಲನಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಲಿದೆ ಎಂದರು.
ಮರಣ ಹೊಂದಿ ಧೀರ್ಘಕಾಲವಾದರೂ ಸಂಬಂಧಿತ ಅರ್ಜಿದಾರರು ಪೌತಿ ಖಾತೆ ಮಾಡಿಸಿಕೊಂಡಿಲ್ಲ, ಇಂತಹ ಫಲಾನುಭವಿಗಳು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ, ಸವಲತ್ತು ಪಡೆದುಕೊಳ್ಳಲು ಆಗುವುದಿಲ್ಲ, ಹಾಗಾಗಿ ಯಾರು ಪೌತಿ ಖಾತೆಗಾಗಿ ಅಲೆಯಬಾರದು, ಸರ್ಕಾರದ ಸವಲತ್ತಿನಿಂದ ವಂಚಿತರಾಗಬಾರದು ಎನ್ನುವ ಮಹತ್ವಕಾಂಕ್ಷೆಯಿಂದ ತಾಲೂಕಿನಲ್ಲಿ ಪೌತಿ ಖಾತೆ ಅಭಿಯಾನ ಕೈಗೊಳ್ಳಲಾಗಿದ್ದು, ಸಂಬಂಧಪಟ್ಟವರು ಕೂಡಲೇ ಅರ್ಜಿ ಸಲ್ಲಿಸಿ, ದಾಖಲಾತಿ ಒದಗಿಸಿ ಪೌತಿ ಖಾತೆ ಮಾಡಿಕೊಳ್ಳಿ ಎಂದು ತಿಳಿಸಿದರು.
ತಾಲೂಕಿನ ಪ್ರತಿ ಗ್ರಾಮವಾರು ಹಮ್ಮಿಕೊಂಡಿರುವ ಪೌತಿ ಖಾತೆ ಅಭಿಯಾನ ಸಂಪೂರ್ಣ ಶುಲ್ಕ ರಹಿತವಾಗಿದ್ದು, ಯಾರು ಹಣ ಕೊಡುವಂತಿಲ್ಲ, ಅರ್ಜಿಯೊಂದಿಗೆ ಪೌತಿ ಖಾತೆ ಸಂಬಂಧ ಅರ್ಜಿ, ಮರಣ ಪ್ರಮಾಣ ಪತ್ರ, ವಂಶವೃಕ್ಷ, ಖಾತೆ ಯಾರಿಗೆ ಎನ್ನುವ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ನಿಮ್ಮ ನಿಮ್ಮ ಅಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದು ವಿನಂತಿಸಿದರು.
ಸರ್ಕಾರ ಎಚ್.ಡಿ.ಕೋಟೆ ತಾಲೂಕು ಈ ಬಾರಿ ಬರಪೀಡಿತ ಎಂದು ಘೋಷಣೆಯಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಬೆಳೆ ಪ್ರಮಾಣ ಗುರುತಿಸಿ ಅದರ ಪ್ರಕಾರ ಬರ ಪರಿಹಾರ ನೀಡಲಾಗುತ್ತಿದೆ, ಮುಖ್ಯವಾಗಿ ರಾಗಿ, ಮುಸುಕಿನಜೋಳ, ಹತ್ತಿ ಈ ಮೂರು ಬೆಳೆಗಳಿಗೆ ಬರ ಪರಿಹಾರ ಘೋಷಣೆಯಾಗಿದೆ.
ಈಗಾಗಲೇ ಒಟ್ಟು 7627 ಫಲಾನುಭವಿಗಳು ಬರ ಪರಿಹಾರಕ್ಕೆ ಆರ್ಹರಾಗಿದ್ದು, ಒಟ್ಟು 1ಕೋಟಿ, 41 ಲಕ್ಷದ 330 ರೂಗಳನ್ನು ಫಲಾನುಭವಿಗಳಿಗೆ ಮೊದಲ ಕಂತಿನ ರೂಪದಲ್ಲಿ 2 ಸಾವಿರ ನೀಡಲಾಗುತ್ತಿದೆ, ಫೇಸ್ ಒನ್ ಫೇಸ್ ಟೂ ಎಂದು ಎರಡು ಹಂತದಲ್ಲಿ ರೈತರು ಎಷ್ಟು ವಿಸ್ತೀರ್ಣ ಪ್ರದೇಶದಲ್ಲಿ ಎನ್ನುವುದನ್ನು ಆಧರಿಸಿ ಸರ್ಕಾರ ರೈತರ ಖಾತೆಗೆ ಬರ ಪರಿಹಾರದ ಹಣ ಜಮೆ ಆಗಲಿದೆ ಎಂದರು.
ಬರ ಪರಿಹಾರ ಪಡೆಯುವ ಪ್ರತಿಯೊಬ್ಬ ಫಲಾನುಭವಿಯೂ ಪ್ರೂಟ್ಸ್ ಆಪ್ನಲ್ಲಿ ನೋಂದಣಿ ಕಡ್ಡಾಯ, ಈಗಾಗಲೇ ಶೇ.76 ರಷ್ಟು ಫಲಾನುಭವಿಗಳು ನೋದಣಿಯಾಗಿದೆ, ಇನ್ನುಳಿದವರು ಜಮೀನು ಇಲ್ಲಿದ್ದು ಬೇರೆ ಕಡೆ ವಾಸವಾಗಿದ್ದಾರೆ ಅಂತವರಿಂದ ದಾಖಲಾತಿ ಪಡೆದುಕೊಳ್ಳುವುದು ಕಷ್ಟವಾಗಿದೆ, ಆದ್ರೂ ನಾವು ಸಂಪರ್ಕ ಸಾಧಿಸಿ ದಾಖಲಾತಿಗಳನ್ನು ಪಡೆದುಕೊಂಡು ನೋಂದಣಿ ಮಾಡಲಾಗುತ್ತಿದೆ, ಯಾರೇ ಫಲಾನುಭವಿ ಸರ್ಕಾರದ ಸೌಲಭ್ಯ ಸವಲತ್ತಿನಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಉಪ ತಹಶೀಲ್ದಾರ್ ಸಣ್ಣರಾಮಪ್ಪ ಇದ್ದರು.