ಮೈಸೂರು: ವಿಶೇಷ ಮಕ್ಕಳು ದೇವರ ಮಕ್ಕಳಾಗಿದ್ದು, ತಂದೆತಾಯಿಯರು ಧೈರ್ಯಗೆಡದೆ ನೀವು ಇರುವವರೆಗೆ ನೋಡಿಕೊಳ್ಳಿರಿ ಮುಂದಿನ ದಿನಗಳಲ್ಲಿ ಭಗವಂತ ನೋಡಿಕೊಳ್ಳುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಸ್ವ-ಸಹಾಯ ಸಮುಚ್ಛಯ ‘ನಿರೀಕ್ಷೆ’ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ 36ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆನ್ನಾಗಿರುವ ಮಕ್ಕಳಿಗೆ ಪಾಠ ಮಾಡುವುದೇ ಕಷ್ಟದ ಕೆಲಸವಾಗಿದ್ದು, ಇಂತಹ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಪಾಠ ಹೇಳಿ, ಬುದ್ಧಿ ಕಲಿಸಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವ ಈ ಸಂಸ್ಥೆ, ನೂರು ವರ್ಷ ಚೆನ್ನಾಗಿ ನಡೆಯಲಿ ಎಂದು ಹಾರೈಸಿದ್ದಾರೆ.
ವಿಶೇಷ ಮಕ್ಕಳಿಗೆ ಜನ್ಮನೀಡಿದ ತಂದೆತಾಯಂದಿರು ಎದೆಗುಂದ ಬೇಕಾಗಿಲ್ಲ. ವಿಶೇಷ ಮಕ್ಕಳು ಇಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದ್ದರಿಂದ ಆ ಮಕ್ಕಳ ಭವಿಷ್ಯದ ಬಗ್ಗೆ ತಾಯಂದಿರು ಚಿಂತೆ ಮಾಡಬೇಡಿ ಮುಂದೆ ಅವರನ್ನು ಭಗವಂತ ನೋಡಿಕೊಳ್ಳುತ್ತಾನೆ ಎಂದ ಅವರು, ಮುಡಾದಿಂದ ಸಂಸ್ಥೆಗೆ ಮಂಜೂರಾಗಿರುವ ಜಾಗದಲ್ಲಿ ಶಾಲೆ ನಿರ್ಮಿಸಲು ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ 10 ಲಕ್ಷರೂ.ಗಳನ್ನು ನೀಡುವುದಾಗಿ ತಿಳಿಸಿದರು.
ಬೇಬಿ ಮಠದ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಜಿ ಮಾತನಾಡಿ, ಭಗವಂತ ವಿಶೇಷಮಕ್ಕಳ ತಂದೆ ತಾಯಿಯರ ತಾಳ್ಮೆಯನ್ನು ಪರೀಕ್ಷೆ ಮಾಡಲು ಕೊಟ್ಟಿರುವ ಪರೀಕ್ಷೆ ಇದಾಗಿದ್ದು, ವಿಶೇಷ ಮಕ್ಕಳನ್ನು ಸವಾಲಾಗಿ ಸ್ವೀಕರಿಸಿ, ಎದೆಗುಂದಬೇಡಿ ಎಂದ ಅವರು, ಈ ಮಕ್ಕಳಿಗೆ ಬುದ್ದಿ ಹೇಳಿ, ತಿದ್ದಿ ತೀಡುವ ಶಾಲೆಯ ಶಿಕ್ಷಕರು ಎರಡನೇ ತಾಯಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಲೆಯ ಗೌರವ ಅಧ್ಯಕ್ಷೆ ಸವಿನಾ, ಕಾರ್ಯದರ್ಶಿ ತ್ರಿಮೂರ್ತಿ, ಖಜಾಂಚಿ ಕೆ.ವಿ. ಮುತಾಲಿಕ್, ಕೆ.ಎ.ಪಾಂಡರಂಗಶೆಟ್ಟಿ, ಬಿ.ಎಸ್. ಜಗನಾಥ್ ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.