ಮೈಸೂರು: ಬಜರಂಗದಳ ಬ್ಯಾನ್ ಎನ್ನುವುದು ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಇದ್ದಂತೆ. ಕಾಂಗ್ರೆಸ್ನವರು ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಇಂತಹ ಬ್ಯಾನ್ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಜರಂಗದಳ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ಅಧಿಕಾರಕ್ಕೆ ಬಾರದೆ ಇರುವವರು ಏನು ಬೇಕಾದರೂ ಕನಸು ಕಾಣಬಹುದು. ಬಜರಂಗದಳ ಬ್ಯಾನ್ ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಇದ್ದಂತೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ವರುಣ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸೋಮಣ್ಣ ಗೆಲುವು ನಿಶ್ಚಿತ. ವರುಣದಲ್ಲಿ ಗೆದ್ದು ಸೋಮಣ್ಣ ವಿಧಾನಸೌಧಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಸೋತು ಮನೆ ಸೇರುತ್ತಾರೆ. ಇದರಲ್ಲಿ ಯಾವ ಅನುಮಾನಗಳೂ ಬೇಡ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ. 130 ರಿಂದ 135 ಸ್ಥಾನ ನಾವು ಗೆಲ್ಲುತ್ತೇವೆ. ಸ್ಪಷ್ಟ ಬಹುಮತದ ಸರ್ಕಾರ ಈ ಬಾರಿ ನಿಶ್ಚಿತ. ಸಮ್ಮಿಶ್ರ ಸರ್ಕಾರಗಳ ಪಾಡನ್ನು ನಾವು ಅನುಭವಿಸಿದ್ದೇವೆ. ಈ ಬಾರಿ ಅಂತಹ ಸ್ಥಿತಿ ಬರುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಅತಿ ಹೆಚ್ಚಿನ ಸಮಯ ಕೊಟ್ಟಿದ್ದಾರೆ. ಇದರ ಲಾಭ ಪಕ್ಷಕ್ಕೆ ಆಗಲಿದೆ ಎಂದು ಹೇಳಿದರು.