ಮೈಸೂರು: ಜಿಲ್ಲೆಯ ಹುಲ್ಲಹಳ್ಳಿ ಸಮೀಪದ ದುಗ್ಗಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ ಸುಮಾರು ಹತ್ತು ಹಸುಗಳಲ್ಲಿ ಮೂರು ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇದರಿಂದ ರೈತರು ಕಂಗಲಾಗಿದ್ದಾರೆ.
ಹಳಾಪುರ ಕೆಂಪಣ್ಣ ಮತ್ತು ಸಿದ್ದಪ್ಪ ಎಂಬುವರಿಗೆ ಸೇರಿದ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಇದ್ದಕ್ಕಿದ್ದಂತೆ ಎಲ್ಲ ಹಸುಗಳು ಅಸ್ವಸ್ಥಗೊಂಡು ನರಳಾಡುತ್ತಿದ್ದನ್ನು ನೋಡಿದ ಗ್ರಾಮಸ್ಥರು ತಕ್ಷಣವೇ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ವೈದ್ಯರು ಹಸುಗಳಿಗೆ ಔಷಧಿ ನೀಡಿ ಉಪಚರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂರು ಹಸುಗಳು ಸಾವನ್ನಪ್ಪಿವೆ.
ಹಸುಗಳ ಹಠಾತ್ ಸಾವಿನಿಂದ ಹಾಲಿನಿಂದಲೇ ಜೀವನ ನಡೆಸುತ್ತಿದ್ದ ಕೆಂಪಣ್ಣ ಮತ್ತು ಸಿದ್ದಪ್ಪ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಶುಂಠಿ ಬೆಳೆಯಲು ಶುಂಠಿ ಬೆಳೆಗಾರರು ಔಷಧಿಯನ್ನು ಸಿಂಪಡಿಸಿದ್ದು, ಅವುಗಳನ್ನು ಹಸುಗಳು ತಿಂದು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರು ಶುಂಠಿ ಬೆಳೆಗಾರರಿಗೆ ಔಷಧಿ ಸಿಂಪಡಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚನೆ ನೀಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಸುಗಳ ಸಾವಿನಿಂದಾಗಿ ಜೀವನಾಧಾರವನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರವು ಸಹಾಯ ನೀಡಬೇಕೆಂದು ಆಗ್ರಹಿಸಿದ್ದಾರೆ. ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಬಿಜೆಪಿ ಗ್ರಾಮಾಂತರ ತಾಲೂಕು ಅಧ್ಯಕ್ಷ ಹೊರಳವಾಡಿ ಮಹೇಶ್ ಮೃತಪಟ್ಟ ಹಸುಗಳ ಮಾಲೀಕರಿಗೆ ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದ್ದಾರೆ.