ಮೈಸೂರು: ಕುವೆಂಪುರವರ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಬದಲಾಯಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಡಾ. ರಾಜಕುಮಾರ್ ಉದ್ಯಾನವನದ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಧ್ಯಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು, ಎಂದು ಬದಲಾಯಿಸಿ ಈ ನೆಲದ ಸಂಸ್ಕೃತಿಯಾದ ವಿದ್ಯಾ ಮಂದಿರದ ಪಾವಿತ್ರ್ಯವನ್ನು ಹಾಳು ಮಾಡಲು ಹೊರಟಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ನಡೆ ಅವಮಾನವೀಯ ಎಂದು ಹೇಳಿದರು.
ನಮ್ಮ ನಾಡಿಗೆ – ರಾಜ್ಯಕ್ಕೆ – ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವ ಮೂಲಕ ಕುವೆಂಪು ಅವರು ನಮ್ಮ ರಾಜ್ಯದ ಆಸ್ತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯ, ದಶಕಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆಯಾಗಿದೆ. ಕೈಮುಗಿದು ಒಳಗೆ ಬಾ ಎಂದರೆ, ಅಹಂಕಾರ ತೊರೆದು, ವಿನಯಶೀಲನಾಗಿ, ಜ್ಞಾನ ಸಂಪಾದಿಸಲು, ಭೇದಭಾವ ತೊರೆದು, ನಿನ್ನ ಹೆದರಿಕೆ ಎಲ್ಲವನ್ನೂ ಬಿಟ್ಟು ಬಂದು, ವಿದ್ಯೆಯನ್ನು ಶ್ರದ್ಧೆಯಿಂದ ಕಲಿಯೆಂದು.
ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅರಿವಿಲ್ಲದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ತನ್ನ ಮೌಖಿಕ ಆದೇಶದ ಮೇರೆಗೆ ವಸತಿ ಶಾಲೆಗಳಲ್ಲಿ ಬದಲಾವಣೆ ಮಾಡಿರೋದು ಅತ್ಯಂತ ಖಂಡನೀಯ, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಸರ್ಕಾರ ಇದನ್ನು ಈ ಕೂಡಲೇ ಸರಿಪಡಿಸಬೇಕು ಹಾಗೂ ಮಣಿವಣ್ಣನ್ ರವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇನಾ ಪಡೆಯ ಕೃಷ್ಣಪ್ಪ, ಪ್ರಭುಶಂಕರ್ ಎಂ ಬಿ, ಪ್ರಜೀಶ್ ಪಿ, ಕುಮಾರ್ ಬಸಪ್ಪ, ಮಹದೇವಸ್ವಾಮಿ, ಹನುಮಂತಯ್ಯ, ರಾಮಕೃಷ್ಣೇಗೌಡ, ರಾಧಾಕೃಷ್ಣ, ವಿಷ್ಣು, ದರ್ಶನ್ ಗೌಡ, ಪದ್ಮ, ಸ್ವಾಮಿ ಗೌಡ, ಪ್ರದೀಪ್, ಗುರುಮಲ್ಲಪ್ಪ, ತ್ಯಾಗರಾಜ್ ಎಳನೀರು ರಾಮಣ್ಣ, ಪ್ರಭಾಕರ ಮುಂತಾದವರು ಉಪಸ್ಥಿತರಿದ್ದರು.