ಮೈಸೂರು: ಇಲ್ಲಿನ ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ಹಾಗೂ ಗುಜರಾತ್ ರಾಜ್ಯದ ಇಂಡೆಕ್ಸ್ಟ್ ಸಿ ಸಹಯೋಗದಲ್ಲಿ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಮೇ 19ರಿಂದ 29ರವರೆಗೆ ಹಮ್ಮಿಕೊಂಡಿರುವ ‘ಗುಜರಾತ್ ಕರಕುಶಲ ಉತ್ಸವ ಗಮನಸೆಳೆಯುತ್ತಿದೆ.
ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಸತತವಾಗಿ 9ನೇ ಬಾರಿಗೆ ಪ್ರಾಂತೀಯ ಮೇಳ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ ಆಯೋಜನೆಗೊಂಡಿದೆ. ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲವಾಗಿರುವ ಸುಮಾರು 80 ಹೆಚ್ಚು ಕುಶಲಕರ್ಮಿಗಳು ಈ ಬಾರಿಯ ಮೇಳದಲ್ಲಿ ತಮ್ಮ ವಿಶಿಷ್ಟ ಉತ್ಪನ್ನಗಳ ಜತೆಗೆ ಮೈಸೂರಿಗರ ಮನಗೆಲ್ಲುತ್ತಿದ್ದಾರೆ.
ಈ ಬಾರಿಯ ಗುಜರಾತ್ ಕರಕುಶಲ ಮೇಳದಲ್ಲಿ ಎಲ್ಲಿ ನೋಡಿದರೂ ಆಲಂಕಾರಿಕ ವಸ್ತುಗಳು ಗಮನ ಸೆಳೆಯುತ್ತಿವೆ. ಒಂದಕ್ಕೊಂದು ಭಿನ್ನವಾದ ವಿನ್ಯಾಸ, ಹೊಳಪಿನಿಂದ ಕೂಡಿರುವ ಇವುಗಳು ಮನ ಗೆಲ್ಲುತ್ತಿವೆ. ಮನೆಯ ಪ್ರವೇಶ ದ್ವಾರಕ್ಕೆ ತೂಗುಹಾಗುಕ ಆಲಂಕಾರಿಕ ವಸ್ತುಗಳು, ಮನೆಯೊಳಗೆ ಅಳವಡಿಸಬಹುದಾದ ಆಕರ್ಷಕ ವಸ್ತುಗಳ ಅಪಾರ ಸಂಗ್ರಹವೂ ಇಲ್ಲಿವೆ.
ಬಗೆಬಗೆಯ ಪಾದರಕ್ಷೆಗಳು ಗಮನ ಸೆಳೆಯುತ್ತಿವೆ. ಎಲ್ಲ ವಯೋಮಾನದವರಿಗೂ ಒಪ್ಪಿಗೆಯಾಗುವಂಥ, ಉತ್ತಮ ಗುಣಮಟ್ಟದ, ಕಡಿಮೆ ಬೆಲೆಗೆ ಸಿಗುವ ಪಾದರಕ್ಷೆಗಳ ಅಪಾರ ಸಂಗ್ರಹವೇ ಇದೆ. ಜತೆಗೆ, ಪುರುಷರಿಗೆ, ಮಹಿಳೆಯರಿಗೆ ಬೇಕಾಗುವಂಥ ಪರ್ಸ್ಗಳು, ವ್ಯಾನಿಟಿ ಬ್ಯಾಗ್ಗಳೂ ಇವೆ. ಸೆಣಬಿನ ಚೀಲಗಳಂತೂ ಬಲು ಆಕರ್ಷಕವಾಗಿವೆ. ವಿವಿಧ ಬಣ್ಣ, ವಿವಿಧ ಚಿತ್ರಣಗಳನ್ನು ಒಳಗೊಂಡಿರುವ, ಎಂಬ್ರಾಯ್ಡರಿ ಮಾಡಿರುವ ಬ್ಯಾಗ್ಗಳು ಚಿತ್ತಾಕರ್ಷಕವಾಗಿವೆ.
ವಿವಿಧ ಸಮಾರಂಭ, ಹಬ್ಬಗಳಲ್ಲಿ ಮಹಿಳೆಯರಿಗೆ ಮೆರುಗು ನೀಡುವಂಥ ವಿವಿಧ ಆಭರಣಗಳ ಅಪಾರ ಸಂಗ್ರಹವೂ ಮೇಳದಲ್ಲಿದೆ. ವಿವಿಧ ಬಗೆಯ ಸ್ಟೋನ್ ಆಭರಣಗಳು ಆಭರಣ ಪ್ರಿಯರನ್ನು ಹಿಡಿದು ನಿಲ್ಲಿಸುಷ್ಟರ ಮಟ್ಟಿಗೆ ಆಕರ್ಷಕವಾಗಿವೆ. ವಿವಿಧ ಗಾತ್ರ, ವಿನ್ಯಾಸದ ಆಭರಣಗಳು ಇವೆ. ಕೈಮಗ್ಗದ ಬಟ್ಟೆಗಳು, ಹಸ್ತಕಲಾ ಸಂಸ್ಥೆಯ ಮಳಿಗೆಗಳಲ್ಲಿವೆ. ವಿವಿಧ ಬಗೆಯ ಮಣಿಗಳು, ಲೋಹಗಳಿಂದ ತಯಾರಿಸಿರುವ ಆಭರಣಗಳೂ ಇವೆ. ಅಲ್ಲದೆ, ವಿವಿಧ ವಿನ್ಯಾಸ, ಬಗೆಬಗೆಯ ಜಮಖಾನಗಳೂ ಇವೆ.
ವಿಶಿಷ್ಟ ಕಲಾ ಪ್ರಕಾರವಾದ ನೇಲ್ ಆರ್ಟ್ ಕಲಾವಿದರು ಮೇಳದ ವಿಶೇಷ ಆಕರ್ಷಣೆಯಾಗಿದ್ದಾರೆ. ಬಿಳಿಯ ಕಾಗದದ ಮೇಲೆ ನಿಮ್ಮ ಬಯಕೆಯ ಚಿತ್ರಗಳನ್ನು ಉಗುರಿನ ಸಹಾಯದಿಂದಲೇ ಮೂಡಿಸಿ ಅದಕ್ಕೆ ಬಣ್ಣ ತುಂಬಿ ಜೀವಕಳೆ ನೀಡುವ ಕಲಾವಿದರ ಕೈಚಳಕಕಂಡು, ಚಿತ್ರಗಳನ್ನು ಖರೀದಿಸಲೂ ಅವಕಾಶ ಇದೆ.
ಈ ಬಾರಿಯ ಮೇಳದಲ್ಲಿ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್ಗಳು, ಕುಶನ್ ಕವರ್ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಆಕರ್ಷಕ ಕರಕುಶಲ ವಸ್ತುಗಳ ಅಪಾರ ಸಂಗ್ರಹವಿದೆ. ಕೈಮಗ್ಗದ ಉತ್ಪನ್ನಗಳು ಇಲ್ಲಿದ್ದು, ಕುಶಲಕರ್ಮಿಗಳ ಕೌಶಲದ ಜಾಣ್ಮೆಯನ್ನು ಇವು ಅನಾವರಣಗೊಳಿಸುತ್ತಿವೆ.
ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ಗುಜರಾತಿನ ಕುಶಲಕರ್ಮಿಗಳು ಉಚಿತವಾಗಿ ತರಬೇತಿ ನೀಡಲಿದ್ದಾರೆ. ಉತ್ಸವಕ್ಕೆ ಪ್ರವೇಶವೂ ಉಚಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೈಸೂರು ನಗರ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಬಸ್ ಸೇವೆಯೂ ಇದೆ.