ನಂಜನಗೂಡು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರವಾಗಿರುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಿಂದ ಕೆಂಬಾಲು ಗ್ರಾಮದ ತನಕ 2018-19 ರಲ್ಲಿ ಶಾಸಕರಾಗಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಬರೋಬರಿ 50 ಲಕ್ಷ ರೂ. ಹಣವನ್ನು ಕಬಿನಿ ನಾಲೆಯ ಮೆಟ್ಲಿಂಗ್ ಕಾಮಗಾರಿಯ ಅಭಿವೃದ್ಧಿಗೆ ಮಂಜೂರು ಮಾಡಿದರು.
ಹುಲ್ಲಹಳ್ಳಿಯ ನೀರಾವರಿ ಕಚೇರಿಯ ಅಧೀನದಲ್ಲಿ ಟೆಂಡರ್ ಮೂಲಕ ಮೈಸೂರು ಮೂಲದ ಗುತ್ತಿಗೆದಾರರೊಬ್ಬರು ಅರ್ಧ ಕೋಟಿ ಮೊತ್ತದ ಕಾಮಗಾರಿಯನ್ನು ಟೆಂಡರ್ ಪಡೆದುಕೊಳ್ಳಲಾಗಿತ್ತು. ಟೆಂಡರ್ ಪಡೆದು ಐದು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸದ ಕಾರಣ. ಟೆಂಡರ್ ಪಡೆದುಕೊಂಡಿದ್ದ ಗುತ್ತಿಗೆದಾರನಿಗೆ ಹುಲ್ಲಹಳ್ಳಿ ನೀರಾವರಿ ಇಲಾಖೆ ನೋಟಿಸ್ ಜಾರಿ ಮಾಡಲಾಗಿತ್ತು. ಅಧಿಕಾರಿಗಳು ನೀಡಿದ ನೋಟಿಸ್ ಗೆ ಬೆದರಿದ ಗುತ್ತಿಗೆದಾರ ಅರ್ಧ ಕೋಟಿ ಮೊತ್ತದ ಕಾಮಗಾರಿಯನ್ನು ತನ್ನ ಮನಬಂದಂತೆ ಕಳಪೆ ಗುಣಮಟ್ಟದಲ್ಲಿ ಮೆಟ್ಲಿಂಗ್ ಕಾಮಗಾರಿ ನಿರ್ಮಿಸಿ ಕೈ ತೊಳದುಕೊಂಡಿದ್ದಾನೆ.
ಈ ಕಾಮಗಾರಿಯನ್ನು ಗಮನಿಸಿದ ರಾಂಪುರ ಮತ್ತು ಸುತ್ತಮುತ್ತಲ ಗ್ರಾಮದ ರೈತರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿರುವ ಮೆಟ್ಲಿಂಗ್ ಕಾಮಗಾರಿಯನ್ನು ಸರಿದೂಗಿಸಿ, ಇಲ್ಲದಿದ್ದಲ್ಲಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.