ಮೈಸೂರು: ಕಾನೂನು ಉಲ್ಲಂಘನೆ ಮಾಡದೇ ಪೊಲೀಸರೊಂದಿಗೆ ಸಹಕಾರ ನೀಡುವಂತೆ ಎಸ್ಪಿ ಸೀಮಾ ಲಾಟ್ಕರ್ ಮನವಿ ಮಾಡಿದರು.
ಮೈಸೂರು ಗ್ರಾಮಾಂತರ ಉಪವಿಭಾಗ ವ್ಯಾಪ್ತಿಯ ಆರು ಪೊಲೀಸ್ ಠಾಣೆ ಒಳಗೊಂಡಂತೆ ನಗರದ ಡಿಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಕಾನೂನನ್ನು ಉಲ್ಲಂಘನೆ ಮಾಡದೇ ಪೊಲೀಸರೊಂದಿಗೆ ಸಹಕಾರ ನೀಡಬೇಕು. ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿ ಆಗಿದ್ದು ಮಧವರ್ತಿಗಳಿಲ್ಲದೇ ಭಯ ಪಡದೇ ಠಾಣೆಗೆ ಬಂದು ತಮಗಾಗಿರುವ ನೋವುಗಳ ಬಗ್ಗೆ ದೂರು ನೀಡಬಹುದು. ಅಲ್ಲದೇ ಸಾರ್ವಜನಿಕರು ತಮ್ಮ ದೂರು ನೀಡಿದಾಗ ನಮ್ಮ ಸಿಬ್ಬಂದಿ ಸತಾಯಿಸಿದರೆ ನಮಗೆ ಮಾಹಿತಿ ನೀಡಿದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಹಿಳೆಯರು, ಮಕ್ಕಳ ಮೇಲೆ ಕೌಟುಂಬಿಕವಾಗಿ ಔದ್ಯೋಗಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿಯ ಶೋಷಣೆ, ದೌರ್ಜನ್ಯ, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಪಡಿಸುವುದು, ಮಹಿಳಾ ಸಾಂತ್ವನದ ಹೆಸರಲ್ಲಿ ನೊಂದವರ ಬಳಿ ವಿವಿಧ ಬೇಡಿಕೆ ಇಡುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿದ್ದು ಗ್ರಾಮೀಣ ಭಾಗದ ಜನರೂ ಸಹ ವಂಚಕ ಕರೆಗಳ ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಅಂತಹ ಸಮಯದಲ್ಲಿ ೧೯೩೦ ಸಹಾಯವಾಣಿ ಬಳಸಿಕೊಳ್ಳುವಂತೆ ಸೂಚಿಸಿದರು. 112 ಸಹಾಯವಾಣಿ ತುರ್ತು ಸಂದರ್ಭದಲ್ಲಿ ಜನರ ಸೇವೆಗೆ ಲಭ್ಯವಿದ್ದು ಗ್ರಾಮೀಣ ಭಾಗದಲ್ಲಿರುವ ಜನತೆ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.