ಗುಂಡ್ಲುಪೇಟೆ: ಹಾಲಿನ ಟ್ಯಾಂಕರ್ ಪಿಕಪ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮೈಸೂರು- ಕೋಯಿಕೋಡ್ ರಾಷ್ಟ್ರೀಯ ಹೆದ್ದಾರಿಯ ಗುಂಡ್ಲುಪೇಟೆ ಪಟ್ಟಣದ ಸಮೀಪದ ಕೂತನೂರು ಗ್ರಾಮದ ಬಳಿ ನಡೆದಿದೆ.
ಕೇರಳ ಮೂಲದ ಅಲ್ತಾಪ್( 22) ಅಜ್ಮೀರ್(19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಮೃತರು ಪಿಕಪ್ ನಲ್ಲಿ ಈರುಳ್ಳಿಯನ್ನು ತುಂಬಿಸಿಕೊಂಡು ಕೇರಳಕ್ಕೆ ತೆರಳುತ್ತಿದ್ದರು. ಹೆದ್ದಾರಿಯ ಗುಂಡ್ಲುಪೇಟೆ ಪಟ್ಟಣದ ಸಮೀಪದ ಕೂತನೂರು ಗ್ರಾಮದ ಬಳಿ ತಮಿಳುನಾಡು ಮೂಲದ ಖಾಸಗಿ ಹಾಲಿನ ಟ್ಯಾಂಕರ್ ಪಿಕಪ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪಿಕಪ್ ನಲ್ಲಿದ್ದ ಅಲ್ತಾಪ್ ಮತ್ತು ಅಜ್ಮೀರ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಲ್ಲದೆ, ವಾಹನವನ್ನು ವಶಕ್ಕೆ ಪಡೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.