ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಅವರ ಕುಟುಂಬದ ಮೂವರಿಗೆ ಕೊರೊನಾ ಕಾಣಿಸಿಕೊಳ್ಳುವುದರೊಂದಿಗೆ ಸಕ್ರಿಯ ಪ್ರಕರಣ ಸಂಖ್ಯೆ 7,141ಕ್ಕೇರಿದಂತಾಗಿದೆ.
ಸದ್ಯ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ತಂದೆ, ಐದು ವರ್ಷದ ಮಗನಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲವು ದಿನಗಳಿಂದ ಡಾ.ಬಗಾದಿ ಗೌತಮ್ ಅವರು ಕರ್ತವ್ಯ ನಿಮಿತ್ತ ಮೈಸೂರಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಭಾನುವಾರ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಕುಟುಂಬಸ್ಥರನ್ನು ತಪಾಸಣೆಗೊಳಪಡಿಸಿದ್ದರು. ಡಾ.ಬಗಾದಿ ಗೌತಮ್ ಸೇರಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಡಾ.ಬಗಾದಿ ಗೌತಮ್ ಅವರ ಪತ್ನಿ ಅಶ್ವಥಿ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿದ್ದು, ಅವರು ಮಂಡ್ಯದಲ್ಲೆ ಉಳಿದಿದ್ದ ಕಾರಣ ಅವರಿಗೆ ಸೋಂಕು ತಗುಲಿಲ್ಲ ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಕಚೇರಿಯ 19 ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ನಿಯಂತ್ರಣಕ್ಕೆ ಹಲವು ಕಾರ್ಯಗಳನ್ನು ಆನ್ಲೈನ್ ಸೇವೆ ಮೂಲಕ ಒದಗಿಸುತ್ತಿದ್ದರೂ ಜಿಪಂನ ವಿವಿಧ ಶಾಖೆಗಳ 19 ಮಂದಿಗೆ ಸೋಂಕು ದೃಢಪಟ್ಟಿದೆ. ಕಚೇರಿಗೆ ಸ್ಯಾನಿಟೈಸ್ ಮಾಡಿ ಉಳಿದ ಸಿಬ್ಬಂದಿಗೆ ಒಂದು ದಿನದ ಮಟ್ಟಿಗೆ ಮನೆಯಲ್ಲೇ ಇರುವಂತೆ ಕಳುಹಿಸಲಾಗಿದೆ. ಕಚೇರಿಯ ಪ್ರವೇಶ ದ್ವಾರದ ಗೇಟಿಗೆ ಬೀಗ ಹಾಕಿ ಸಾರ್ವಜನಿಕರನ್ನು ವಾಪಸ್ ಕಳುಹಿಸಲಾಗಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಪ ಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿ, ಮುಖಲೆಕ್ಕಾಧಿಕಾರಿ ಕೊಠಡಿ ಸೇರಿ ಇಡೀ ಜಿಪಂ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಯಿತು.
ಮೈಸೂರಲ್ಲಿ ಸೋಮವಾರ 1,770 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇದುವರೆಗಿನ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,88,614 ಕ್ಕೇರಿದ್ದು ಸೋಮವಾರ 232 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಸಾವಿನ ಸಂಖ್ಯೆ ಕಡಿಮೆ ಇರುವುದರಿಂದ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.