ಮೈಸೂರು : ಬೆಂಗಳೂರಿನ ಯುವಕನ ಹತ್ಯೆ ವಿಚಾರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಮು ಗಲಭೆಗೆ ಪ್ರಚೋದನೆ ಹೇಳಿಕೆ ನೀಡಿದ್ದಾರೆ ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸರಿಗೆ ದೂರು ನೀಡಿದೆ.
ಕಾಂಗ್ರೆಸ್ ನಾಯಕರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ಬೆಂಗಳೂರಿನ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣದ ಸಂಬಂಧ ರಾಜ್ಯದಲ್ಲಿ ಅಶಾಂತಿ ಉಂಟಾಗುವಂತೆ ಹೇಳಿಕೆ ನೀಡಿದ್ದಾರೆ. ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ.೫ರಂದು ಸೈಮನ್ ರಾಜ್ ಮತ್ತು ಚಂದ್ರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುವಾಗ ಮತ್ತೊಂದು ಬೈಕ್ ಚಾಲನೆ ಮಾಡುತ್ತಿದ್ದ ಶಾಹಿದ್ ಬೈಕ್ಗಳ ನಡುವೆ ಡಿಕ್ಕಿ ಉಂಟಾಗಿ ಗಲಾಟೆಗೆ ಕಾರಣವಾಗಿದೆ. ಗಲಾಟೆಯಲ್ಲಿ ಶಾಹಿದ್ ಚಂದ್ರುವಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಮೂರು ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಟ್ವೀಟ್ ಮಾಡಿದ್ದರು. ಇದನ್ನೇ ಮಾಧ್ಯಮಗಳ ಎದುರು ಸ್ಪಷ್ಟಪಡಿಸಿದ್ದರು.
ಆದರೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂದು ಹೇಳಿದಾಗ ಚೂರಿಯಿಂದ ಚುಚ್ಚಿ ಕೊಂದಿದ್ದಾನೆ. ಅವನೊಬ್ಬ ದಲಿತ ಯುವಕನಾಗಿದ್ದು, ಅಮಾನುಷವಾಗಿ ಕೊಂದಿದ್ದಾರೆ ಎಂದು ಹೇಳಿದ್ದಾರೆ. ಗೃಹಸಚಿವರ ಹೇಳಿಕೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಂದ್ರು ಹತ್ಯೆ ವಿಚಾರವನ್ನು ಖಂಡಿಸುವಾಗ ಬುದ್ಧಿಜೀವಿಗಳು ಮೌನವಹಿಸಿದ್ದಾರೆ. ಸತ್ತವರು ಹಿಂದೂಗಳಾದರೆ ಸಿದ್ದರಾಮಯ್ಯ ಅವರಿಗೆ ಸಂತಾಪ ಸೂಚಿಸುವ ಧ್ವನಿಯೂ ಹೊರಗೆ ಬರುವುದಿಲ್ಲ ಎಂದಿದ್ದರು. ಹಾಗಾಗಿ, ತನಿಖೆಯ ಮೇಲೆ ಪ್ರಭಾವ ಬೀರುವ ಹೇಳಿಕೆ ನೀಡಿ ಗೃಹಸಚಿವರು ರಾಜ್ಯದಲ್ಲಿ ಗೊಂದಲ ಮೂಡಿಸಿದರೆ, ಅದನ್ನು ಅನುಮೋದನೆ ನೀಡುವಂತೆ ಕೋಮುಗಲಭೆ ಮತ್ತು ಭಾಷಾ ಸಂಘರ್ಷಕ್ಕೆ ಕಾರಣವಾಗುವಂತೆ ಸಿ.ಟಿ.ರವಿ ಹೇಳಿದ್ದಾರೆ.
ಈ ಇಬ್ಬರು ನೀಡಿರುವ ಹೇಳಿಕೆಗಳ ಹಿಂದೆ ಗುಂಪು ಗುಂಪುಗಳ ನಡುವೆ ದ್ವೇಷ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರೇರಣೆ ನೀಡಿದಂತಾಗಿದೆ. ಹಾಗಾಗಿ, ಈ ಇಬ್ಬರು ಮುಖಂಡರು ಅಪರಾಧಿಕ ಒಳಸಂಚು ನಡೆಸಿ ನೀಡಿದ ಹೇಳಿಕೆ ಧಾರ್ಮಿಕ, ಭಾಷಾಭಿಮಾನಿಗಳಿಗೆ ನೋವುಂಟು ಮಾಡುವ, ಸಾಮಾಜಿಕ ಶಾಂತಿ ಕದಡಲು ಪ್ರೇರೇಪಣೆ ನೀಡುವ ದೇಶದ್ರೋಹದ ಕೃತ್ಯವಾಗಿರುವ ಆರೋಪದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.