ಮೈಸೂರು: ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಿ.ಕೆ ಶ್ರೀನಿವಾಸಮೂರ್ತಿ ಅವರು ಹೇಳಿದರು.
ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ಡಿಪಿಬಿಎಸ್ ಸರ್ಕಾರಿ ಪಿಯು ಕಾಲೇಜಿನಲ್ಲಿ ತಾಲ್ಲೂಕಿನ ವಿವಿಧೆಡೆಯ ಸರ್ಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳ ಪ್ರಾಂಶುಪಾಲರ ಪರೀಕ್ಷಾ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿ,ಪಿರಿಯಾಪಟ್ಟಣ ಸೇರಿದಂತೆ ಮೈಸೂರು ನಗರ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷೆ ಅಂಗವಾಗಿ ನೋಡಲ್ ಸೆಂಟರ್ ಗಳನ್ನು ತೆರೆದು ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ತಾಲ್ಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳ ಉಸ್ತುವಾರಿಯನ್ನು ಅವರು ನಿರ್ವಹಿಸಲಿದ್ದಾರೆ.
ಪಿರಿಯಾಪಟ್ಟಣದಲ್ಲಿ ಡಿಪಿಬಿಎಸ್ ಸರ್ಕಾರಿ ಪಿಯು ಕಾಲೇಜಿನಲ್ಲಿ ನೋಡಲ್ ಸೆಂಟರ್ ತೆರೆದು ಪ್ರಾಂಶುಪಾಲ ಶಿವಶಂಕರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು ತಾಲ್ಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ, ಪರೀಕ್ಷೆಗಳು ನಿಷ್ಪಕ್ಷಪಾತವಾಗಿ ಸುಗಮವಾಗಿ ನಡೆಯಲು ಕೊಠಡಿ ಮೇಲ್ವಿಚಾರಕರಿಗೆ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದ ತರಬೇತಿ ನೀಡಲಿದ್ದಾರೆ, ಪಿರಿಯಾಪಟ್ಟಣ ನಗರದ 2 ಸರ್ಕಾರಿ ಕಾಲೇಜು ಹಾಗೂ ಕಿತ್ತೂರು ಮತ್ತು ಬೆಟ್ಟದಪುರ ಸರ್ಕಾರಿ ಕಾಲೇಜು ಸೇರಿದಂತೆ ತಾಲ್ಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳನ್ನು ತೆರೆದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಏ.22 ರಿಂದ ಮೇ.18 ರವರೆಗೆ ನಡೆಯುವ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲ್ಲೂಕಿನಿಂದ ಒಟ್ಟು 2255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಪಡದೆ ಆತ್ಮವಿಶ್ವಾಸದಿಂದ ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತೆ ಕೋರಿದರು.
ಈ ಸಂದರ್ಭ ಪಿರಿಯಾಪಟ್ಟಣ ತಾಲ್ಲೂಕು ನೋಡಲ್ ಅಧಿಕಾರಿ ಡಿಪಿಬಿಎಸ್ ಕಾಲೇಜು ಪ್ರಾಂಶುಪಾಲ ಶಿವಶಂಕರ್, ಉಪನ್ಯಾಸಕರಾದ ಬಿ.ಎಂ ಶಿವಸ್ವಾಮಿ ಹಾಗೂ ತಾಲ್ಲೂಕಿನ ವಿವಿಧೆಡೆಯ ಪ್ರಾಂಶುಪಾಲರು ಹಾಜರಿದ್ದರು.