ಮೈಸೂರು: ನಗರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿದ್ದು, ಬೆಳಿಗ್ಗೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹೂ, ಪೆನ್ನು, ಚಾಕೋಲೆಟ್ ನೀಡಿ, ಆರತಿ ಎತ್ತಿ ಸ್ವಾಗತಿಸಲಾಯಿತು.
ಬಹಳಷ್ಟು ಶಾಲೆಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಗರದ ಕ್ರೈಸ್ಟ್ ಕಿಂಗ್ ಕಾನ್ವೆಂಟ್ ನಲ್ಲಿ ವಿದ್ಯಾರ್ಥಿಗಳನ್ನು ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು. ಇನ್ನೊಂದೆಡೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು, ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಶಾಸಕರು ರಾಜ್ಯಾದ್ಯಂತ ಪಬ್ಲಿಕ್ ಪರೀಕ್ಷೆಗೆ ಮಕ್ಕಳು ತೆರಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕ್ಷೇತ್ರದಲ್ಲಿ ಬರುವ 12 ಕೇಂದ್ರದಲ್ಲೂ ಕೂಡಾ ಅಲ್ಲಿರುವ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳಿಗೆ ಶುಭ ಹಾರೈಸಿ ಪೆನ್ ಹಾಗೂ ಹೂವನ್ನು ನೀಡಿದ್ದೇವೆ, ಕೋವಿಡ್ ನ ನಂತರದಲ್ಲಿ ಮಕ್ಕಳಿಗೆ ಭಯವಿತ್ತು. ಆದರೆ ಅವರಿಗೆ ಧೈರ್ಯವನ್ನು ನೀಡುವ ಕೆಲಸ ಸರ್ಕಾರ ಮಾಡಿದೆ. ನಾವೂ ಕೂಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಮಕ್ಕಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಮಾಡಿದ್ದೆವು, ನಮ್ಮ ಕಚೇರಿಯಿಂದ ದಿನಂಪ್ರತಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಕರೆಯನ್ನು ಮಾಡಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದೇವೆ.
ಈ ಬಾರಿ ನಮ್ಮ ಶಿಕ್ಷಣ ಅಧಿಕಾರಿಗಳು ಸಾಕಷ್ಟು ಶ್ರಮವನ್ನು ವಹಿಸಿ ಮಕ್ಕಳಿಗೆ ಉತ್ತಮವಾಗಿ ಪರೀಕ್ಷೆ ಎದುರಿಸುವಂತೆ ಸಜ್ಜು ಮಾಡಿದ್ದಾರೆ. ಯಾರು ಕೂಡಾ ಅನ್ನುತ್ತೀರ್ಣರಾಗದ ರೀತಿಯಲ್ಲಿ ತಯಾರು ಮಾಡಿದ್ದೇವೆ ಆದರೂ ಕೂಡಾ ಫೇಲ್ ಆದರೆ ಜೂನ್ ಪರೀಕ್ಷೆಗೆ ಬೇಕಾದಂತಹ ತರಬೇತಿ ನೀಡುತ್ತೇವೆ , ಅದರಲ್ಲೂ ಕೂಡಾ ಅನ್ನುತ್ತೀರ್ಣರಾದರೆ ಸ್ಕಿಲ್ ಅನ್ನು ನೀಡಿ ಜೀವನಕ್ಕೆ ಬೇಕಾದ ದಾರಿ ಮಾಡುವವರಿದ್ದೇವೆ ಎಂದರು.
ಈ ವೇಳೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್, ಮೈಸೂರು ದಕ್ಷಿಣ ವಲಯದ ಬಿ.ಇ. ಓ ಆರ್ ರಾಮಾರಾಧ್ಯ, ನಗರಪಾಲಿಕಾ ಸದಸ್ಯರಾದ ಬಿ.ವಿ. ಮಂಜುನಾಥ್, ಭಾಜಪಾ ಕೆ.ಆರ್.ಕ್ಷೇತ್ರ ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ಉಪಾಧ್ಯಕ್ಷ ಬಾಲಕೃಷ್ಣ ಎಂ.ಆರ್, ಸಂತೋಷ್ ಶಂಭು, ಆಶ್ರಯ ಸಮಿತಿಯ ಹೇಮಂತ್ ಕುಮಾರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸೇಂಟ್ ಮೇರೀಸ್ ಶಾಲೆಯ ಶಿಕ್ಷಕರು ಇದ್ದರು.