ಮೈಸೂರು, ಏ. 22 ; “ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಲ್ಲ. ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಸ್ಥಿತಿ ಸದ್ಯಕ್ಕೆ ಇಲ್ಲ. ಆದರೂ ಸಭೆ ಸಮಾರಂಭ ಸೇರಿದಂತೆ ಒಳಾಂಗಣ ಕಾರ್ಯಕ್ರಮಗಳಿರುವಲ್ಲಿ ಎಂದಿನಂತೆ ಮಾಸ್ಕ್ ಧರಿಸಬೇಕು” ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಸಚಿವರು, “ದೇಶದಲ್ಲಿ ಕೊರೊನಾ ಹೆಚ್ಚುತ್ತಿದೆ. ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸಬೇಕು ಎಂದರು. ನಮ್ಮ ರಾಜ್ಯದಲ್ಲಿ ಕೊರೊನಾ ಇಲ್ಲ. ದೂರದ ದೆಹಲಿಯಲ್ಲಿ ಮಾತ್ರ ಇದೆ ಎಂದು ನಿರ್ಲಕ್ಷ್ಯವಹಿಸದೇ ಕೊರೊನಾ ನಿಯಮಾವಳಿ ಪಾಲಿಸಬೇಕೆಂದು” ಕರೆ ನೀಡಿದರು.
“ದೆಹಲಿ ಸೇರಿದಂತೆ, ಉತ್ತರ ಭಾರತದ ರಾಜ್ಯಗಳಲ್ಲಿ ಕೊರೊನಾ ಗಣನೀಯವಾಗಿ ಹೆಚ್ಚಾಗುತ್ತಿದೆ. ಹೀಗಿದ್ದರೂ ದೂರದ ಬೇರೆ ದೇಶಗಳಲ್ಲೂ ಕೊರೊನಾ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಲ್ಲ. ಮಾತ್ರವಲ್ಲದೇ ಇನ್ನಿತರ ಕೋವಿಡ್ ನಿಯಮಗಳನ್ನು ಪಾಲಿಸಲು ಈಗಿನಿಂದಲೇ ಆರಂಭಿಸಬೇಕು” ಎಂದರು.
“ದೇಶದಲ್ಲಿ 185 ಕೋಟಿ ಹಾಗೂ ರಾಜ್ಯದಲ್ಲಿ 10.6 ಕೋಟಿ ಜನಕ್ಕೆ ಲಸಿಕೆ ಹಾಕಿಸಿದ್ದರಿಂದ ದೇಶದಾದ್ಯಂತ ಕೋವಿಡ್ 3ನೇ ಅಲೆ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಹೀಗಾಗಿ 4ನೇ ಅಲೆಯಿಂದ ತಪ್ಪಿಸಿಕೊಳ್ಳಬೇಕಾದರೆ ನಿರ್ಲಕ್ಷ್ಯ ವಹಿಸದೇ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು” ಎಂದು ಸಚಿವರು ಮನವಿ ಮಾಡಿದರು.
“12 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಕೇಂದ್ರ ಸರ್ಕಾರ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಇದೆ” ಎಂದು ಸಚಿವ ಸುಧಾಕರ್ ತಿಳಿಸಿದರು.