ಮೈಸೂರು: ಈ ವರ್ಷ ದೇಶದಲ್ಲಿ ಉತ್ತಮ ಮಳೆ ಆಗಿ ಕೃಷಿ ಆದಾಯ ಹೆಚ್ಚಾಗಿದೆ. ದೇಶದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ಕೇಂದ್ರದ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಪ್ರತಿ ನವರಾತ್ರಿ ಹಾಗೂ ಆಷಾಢ ಮಾಸದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು ಬೆಟ್ಟ ಹತ್ತುವ ಸಂಪ್ರದಾಯ ಬೆಳಸಿಕೊಂಡಿದ್ದಾರೆ.
ಈಗ ನವರಾತ್ರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಬುಧವಾರ ಸಂಜೆ ಬರಿಗಾಲಿನಲ್ಲಿ ಮೈಸೂರಿಗೆ ಆಗಮಿಸಿದ ಅವರು ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಚಾಮುಂಡಿಬೆಟ್ಟವನ್ನು ಬರಿ ಕಾಲಿನಲ್ಲಿ ಹತ್ತುವ ಮೂಲಕ ನವರಾತ್ರಿ ಆಚರಣೆ ಹರಕೆಯನ್ನು ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಗೆ ತೀರಿಸಿದರು.
ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ, ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಸುರಕ್ಷಿತವಾಗಿ ಇರಬೇಕು. ಅಯೋಧ್ಯೆಯಲ್ಲಿ ಶತಮಾನಗಳ ನಮ್ಮ ಶ್ರೀರಾಮನ ಕನಸು ಈಡೇರಲಿದೆ. ಅದಕ್ಕಾಗಿ ಯೋಗೀಜಿಯ ಸರ್ಕಾರ ಮತ್ತೆ ಬರಬೇಕು. ಈ ದೇಶ ನೆಮ್ಮದಿಯಿಂದ ಇರಬೇಕು. ಗಡಿಗಳ ರಕ್ಷಣೆ ಆಗಬೇಕು, ಕೃಷಿಕ ನೆಮ್ಮದಿಯಾಗಿರಬೇಕು ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿದ್ದೇನೆ ಎಂದು ಹೇಳಿದರು.ಉತ್ತರ ಪ್ರದೇಶದ ಸಹ ಪ್ರಭಾರಿ ಆಗುವ ಅವಕಾಶ ನನಗೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ದೊಡ್ಡ ಯುದ್ದವೇ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ದೇಶದ ರಾಜಕೀಯ ನಿರ್ಣಯ ಮಾಡುವ ಚುನಾವಣೆ ಇದೆ ಎಂದರು.
ನಮಗೆ ಪೊಟಾಷ್ ಹೊರ ದೇಶದಿಂದ ಬರುತ್ತೆ. ಕೊರೊನಾ ಕಾರಣಕ್ಕೆ ವಿದೇಶದಿಂದ ಬರುವ ರಸಗೊಬ್ಬರದಲ್ಲಿ ಕೊಂಚ ಕೊರತೆ ಇದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನೆರಡು ವರ್ಷದಲ್ಲಿ ರಸಗೊಬ್ಬರದಲ್ಲೂ ಸ್ವಾವಲಂಬಿ ಆಗುವತ್ತ ಕಾರ್ಯಕ್ರಮ ರೂಪಿಸಿದೆ. ಅದರಲ್ಲೂ ಆತ್ಮನಿರ್ಭರ ಆಗುವಂತೆ ಹೆಚ್ಚು ಕಾರ್ಖಾನೆಗಳ ಸ್ಥಾಪನೆಯಾಗುತ್ತಿವೆ. ಈಗ ಎಣ್ಣೆ ತೈಲ ಹೊರತುಪಡಿಸಿ, ದೇಶ ಉಳಿದ ಎಲ್ಲಾ ವಿಚಾರದಲ್ಲಿ ಆತ್ಮನಿರ್ಭರ ಸಾಧಿಸಿದೆ. ಖಾದ್ಯ ತೈಲದ ವಿಚಾರದಲ್ಲೂ ನಾವು ಸ್ವಾವಲಂಬನೆ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.