ಮೈಸೂರು: ನಗರದ ಪ್ರತಿಷ್ಠಿತ ಕಟ್ಟಡಗಳಲ್ಲೊಂದಾದ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್ ಡೌನ್ ಬಿಲ್ಡಿಂಗ್ ಶಿಥಿಲಗೊಂಡಿದ್ದು, ಸದ್ಯದಲ್ಲಿಯೇ ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ಶೈಲಿಯಲ್ಲಿಯೇ ಹೊಸದಾಗಿ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಚುಮುಚುಮು ಚಳಿ ಹಾಗೂ ತುಂತುರು ಮಳೆಯ ನಡುವೆಯೇ ಸಚಿವ ಭೈರತಿ ಬಸವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ಬೆಳಿಗ್ಗೆ ನಗರ ಪ್ರದಕ್ಷಿಣೆ ನಡೆಸುವ ಮೂಲಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಪಾಲಿಕೆ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಈ ವೇಳೆ ಮೊದಲಿಗೆ ದೇವರಾಜ ಮಾರುಕಟ್ಟೆಗೆ ತೆರಳಿದ ಸಚಿವದ್ವಯರು ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಸಕ ಎಲ್.ನಾಗೇಂದ್ರ ಅವರು ಮಾರುಕಟ್ಟೆಯ ಸುತ್ತ ಶಿಥಿಲಗೊಂಡಿರುವ ಗೋಡೆಗಳನ್ನು ತೋರಿಸಿ, ಇದು ಅಪಾಯಕ್ಕೆ ಆಹ್ವಾನ ಕೊಟ್ಟಂತಾಗಿದೆ. ಹೆಚ್ಚಿನ ಅನಾಹುತ ಆಗುವ ಮೊದಲು ಇಲ್ಲಿನ ಸಮಸ್ಯೆಯನ್ನು ಪರಿಹರಿಸಿ ಎಂದು ಮನವಿ ಮಾಡಿದರು.
ನಂತರ ಪುರಭವನದ ಆವರಣಕ್ಕೆ ತೆರಳಿದ ಸಚಿವರು ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು. ಮಳೆಯ ನೀರು ಆವರಣದಲ್ಲಿ ನಿಂತಿರುವುದನ್ನು ಕಂಡ ಸಚಿವರು ನಗರದ ಹೃದಯ ಭಾಗದಲ್ಲಿರುವ ಇಂತಹ ಪಾರಂಪರಿಕ ಕಟ್ಟಡದ ನಿರ್ವಹಣೆ ಏಕೆ ಹೀಗಿದೆ ಎಂದು ಪ್ರಶ್ನಿಸಿದರು. ಆದಷ್ಟು ಶೀಘ್ರವಾಗಿ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ ಎಂದು ಹೆಳಿದರು.ನಂತರ ಲ್ಯಾನ್ಸ್ಡೌನ್ ಕಟ್ಟಡ ವೀಕ್ಷಣೆಗೆ ಆಗಮಿಸಿದ ಸಚಿವ ಭೈರತಿ ಬಸವರಾಜ್ ಹಾಗೂ ಎಸ್.ಟಿ.ಸೋಮಶೇಖರ್, ಕಟ್ಟಡದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಟ್ಟಡವನ್ನು ನವೀಕರಿಸಲು ಸಾಧ್ಯವಿಲ್ಲದ ಕಾರಣ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿಯೇ ನಿರ್ಮಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಭೈರತಿ ಬಸವರಾಜ್, ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳು ದುರಸ್ಥಿ ಮಾಡಲಾರದಷ್ಟು ಶಿಥಿಲಗೊಂಡಿದ್ದು, ಹಳೆಯ ಕಟ್ಟಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಎರಡೂ ಕಟ್ಟಡಗಳನ್ನು ನೆಲಸಮ ಮಾಡಬೇಕು. ಹೊಸ ಹಾಗೂ ಪಾರಂಪರಿಕ ಶೈಲಿಯ ಕಟ್ಟಡ ನಿರ್ಮಾಣಕ್ಕೆ ಮುಂದಿನ ೨ ತಿಂಗಳ ಒಳಗಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಾರಂಪರಿಕ ಮಾದರಿಯಲ್ಲೇ ದೇವರಾಜ ಮಾರುಕಟ್ಟೆ, ಲ್ಯಾನ್ಡೌನ್ ಬಿಲ್ಡಿಂಗ್ ನಿರ್ಮಾಣ: ಭೈರತಿ ಬಸವರಾಜ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.