ಮಂಡ್ಯ: ಶ್ರೀ ಗಿರಿಜಾ ಕಲ್ಯಾಣ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ನಗರದ ಶ್ರೀ ವ್ಯಾಸರಾಜ ಮಠ (ಸೋಸಲೆ) ಶ್ರೀರಾಘವೇಂದ್ರಮಠದ ಆವರಣದಲ್ಲಿ 12 ನೇ ವರ್ಷದ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನಡೆಯಿತು.
ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಮಾತನಾಡಿ ಲೋಕದಲ್ಲಿ ದೈವಬಲ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ಜನತೆ ಸುಖಶಾಂತಿ, ನೆಮ್ಮದಿ, ಆರೋಗ್ಯವಂತರಾಗಿ ಬದುಕನ್ನು ನಡೆಸಲು ಮಂಗಳಕಾರಿಯಾದ ಶಿವನನ್ನು ಆರಾಧಿಸುವುದು ಅತ್ಯಂತ ಅಗತ್ಯ. ಇದೊಂದು ಶ್ರೇಷ್ಠತೆಯ ಮಹತ್ಕಾರ್ಯವಾಗಿದ್ದು ಜನತೆ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಉತ್ಸಾಹದಿಂದ ಭಾಗವಹಿಸಿ ಪಾರಮಾರ್ಥಿಕ ಸಂತೋಷವನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಆಯೋಜಕ ಸೋಮಸುಂದರಂ ಮಾತನಾಡಿ ಕಳೆದ 12 ವರ್ಷಗಳಿಂದ ಗಿರಿಜಾ ಕಲ್ಯಾಣ ಮಹೋತ್ಸವ ಭಕ್ತಾದಿಗಳ ಸಹಕಾರದೊಂದಿಗೆ ವೈಭವದಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಮೈಸೂರಿನ ವೇ.ಬ್ರ.ಹರಿಪ್ರಸಾದ್ ಶರ್ಮ ಮತ್ತು ತಂಡ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ಪ್ರಚಾರಕ ಎಸ್.ಎಸ್. ರವಿ ಅವರ ನೇತೃತ್ವದಲ್ಲಿ ಬೆಳಗಿನಿಂದ ಸ್ವಸ್ತಿ ಪುಣ್ಯಾಹ ವಾಚನ, ಶ್ರೀಮಹಾಗಣಪತಿ ಪೂಜೆ, ದೇವನಾಂದಿ, ಮಾತೃಕಾಪೂಜೆ, ನವಗ್ರಹ ಮೃತ್ಯುಂಜಯ ಪರಸ್ಪರ, ಶ್ರೀ ಭವಾನಿ ಶಂಕರ ಕಳಸ ಸ್ಥಾಪನೆ ಪುಣ್ಯಾಹ, ಮಹಾಗಣಪತಿ, ನವಗ್ರಹ, ಮೃತ್ಯುಂಜಯ, ರುದ್ರಹೋಮ, ಶ್ರೀ ಶಿವಸಹಸ್ರನಾಮ ಪಾರಾಯಣ ಮತ್ತು ಶಿವ ಅಷ್ಟೋತ್ತರ ಪಾರಾಯಣ, ಪೂರ್ಣಾಹುತಿ, ಸಂಕಲ್ಪ, ಪರಶಿವನ ಆಹ್ವಾನ, ವರಪೂಜೆ, ಕಾಶಿಯಾತ್ರೆ, ನಿರೀಕ್ಷಣೆ, ಯಜ್ಞೋಪವೀತ ಧಾರಣೆ, ಅಕ್ಷತಾರೋಹಣ, ಡೋಲೋತ್ಸವ, ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ, ಮಹಾ ಮಂಗಳಾರತಿ, ಲಾಜಾಹೋಮ ನಡೆಯಿತು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.
ಗೀತಾಸೋಮಸುಂದರ್, ಅರುಣಾ ಪ್ರಭಾಕರ್,ಭಾರತಿ ಶ್ರೀಧರ್ ಅಡಿಗ, ಕಾಂತಾಮಣಿ, ವೀಣಾ ಚಂದ್ರಹಾಸ, ದಾಮೋದರ, ವಾಸವಿ, ಕೃಷ್ಣ ಭಜನಾ ಮಂಡಳಿಯ ಸದಸ್ಯರು, ಪೂಜಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.