ಭಾರತೀನಗರ: ಗ್ರಾಮಗಳಿಗೆ ಬರಬೇಕಾದರೆ ತಮಟೆ ನಗಾರಿ ಹೊಡೆಸಿಕೊಂಡು ಬರುವವನು ನಾನಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಇಲ್ಲಿಗೆ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ನಾನು ಹಲವು ಬಾರಿ ಬಂದಿದ್ದೇನೆ. ಗ್ರಾಮಕ್ಕೆ ಬರವುದನ್ನು ಕಾರ್ಯಕರ್ತರಿಗೆ ತಿಳಿಸಿ ತಮಟೆ- ನಗಾರಿಗಳನ್ನು ಹೊಡೆಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿಲ್ಲ, ಅದು ನನಗೆ ಅವಶ್ಯಕತೆಯೂ ಇಲ್ಲ. ನನ್ನ ಅಜೆಂಡಾ ಕ್ಷೇತ್ರದ ಅಭಿವೃದ್ದಿಯೊಂದೇ ಎಂದು ತಿಳಿಸಿದರು.
ಶಾಶ್ವತವಾದ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡುತ್ತಾ ಬಂದಿದ್ದೇನೆ. ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಗ್ರಾಮಗಳಲ್ಲಿ ಇರಬಹುದು. ಅವುಗಳನ್ನು ಸಹ ಮಾಡಲು ಮುಂದಿನ ದಿನಗಳಲ್ಲಿ ಅವಕಾಶ ನೀಡಬೇಕೆಂದು ಕೋರಿದರು. ಹಣದ ಆಸೆಗಾಗಿ ನಮ್ಮನ್ನು ನಾವು ಮಾರಿಕೊಳ್ಳಬಾರದು. ಹಣವುಳ್ಳವರು ಆಸೆ- ಆಮಿಷ ವೊಡ್ಡಿ ಮತದಾರರನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ನಾವು ಮಾರಾಟವಾಗಬಾರದು. ಚಿಂತನೆ ನಡೆಸುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕ್ಷೇತ್ರಕ್ಕೆ ನಾನು ಬಂದ ಮೇಲೆ ಗ್ರಾಮಗಳನ್ನು ಹೇಗೆ ಅಭಿವೃದ್ದಿ ಮಾಡಿದ್ದೇನೆಂದು ಎಂಬುವುದನ್ನು ಆಲೋಚಿಸಬೇಕೆಂದರು.
ಎಚ್.ಡಿ.ಕುಮಾರಸ್ವಾಮಿ ಅವರು 45ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ನನ್ನ 23 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ, ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೊಳಿಸುವಲ್ಲಿ ತಾರತಮ್ಯವೆಸಗುತ್ತಿದೆ. ರೈತರ, ಕೂಲಿ ಕಾರ್ಮಿಕರ, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು.
ಜೆಡಿಎಸ್ ರಾಜ್ಯಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಇದೇ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಜಿಲ್ಲಾ ಗೌರವಾಧ್ಯಕ್ಷ ಎಚ್.ಎಂ.ಮರಿಮಾದೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಭುಜುವಳ್ಳಿ ಆರ್.ಐ.ಪುಟ್ಟಸ್ವಾಮಿ, ಅಪ್ಪಾಜೀಗೌಡ, ಕಪರೇಕೊಪ್ಪಲು ಪುಟ್ಟಸ್ವಾಮಿ, ಜುಂಜಯ್ಯ, ಗಾಳಿಹೊನ್ನಯ್ಯ, ಕಾಡುಕೊತ್ತನಹಳ್ಳಿ ತಾ.ಪಂ ಮಾಜಿ ಸದಸ್ಯ ಕೆಂಪರಾಜು, ದಯಾನಂದ್, ಸ್ವಾಮಿಯಣ್ಣ, ಯಡಗನಹಳ್ಳಿ ಕೆಂಚೇಗೌಡ, ವೈ.ಎಂ.ಹನುಮೇಗೌಡ, ಕೆಂಪರಾಜು, ಸಬ್ಬನಹಳ್ಳಿ ಹೊನ್ನೇಗೌಡ, ಕೃಷ್ಣ, ಲಾಯರ್ ಶಿವಲಿಂಗ, ಕುಳ್ಳೇಗೌಡ, ಪುಟ್ಟಲಿಂಗಾಚಾರಿ ಸೇರಿದಂತೆ ಹಲವರಿದ್ದರು.