ಕೆ.ಎಂ.ದೊಡ್ಡಿ: ಇಲ್ಲಿನ ಚಾಂಶುಗರ್ಸ್ ಕಾರ್ಖಾನೆಯು ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಆರಂಭಿಸಿದ್ದು, ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಉಪಾಧ್ಯಕ್ಷ. ಆರ್.ಮಣಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 11 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು ಕಬ್ಬು ಅರೆಯುವ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಬ್ಬಿಗೆ ಸರಕಾರ ನಿಗದಿಪಡಿಸುವ ದರ ನೀಡಲು ನಾವು ಬದ್ದರಾಗಿರುತ್ತೇವೆ. ಪ್ರಸಕ್ತ ಸಾಲಿನಲ್ಲಿ ಒಂದೇ ಕಂತಿನಲ್ಲಿ ಹಣ ಪಾವತಿಸಲು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದು ಅದರಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಸಾಲಿನಲ್ಲಿ 45ದಿನಗಳಿಗೆ ಕಬ್ಬಿನ ಹಣ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಒಂದು ತಿಂಗಳಿಗೆ ಹಣ ಪಾವತಿಸಲು ತೀರ್ಮಾನಿಸಿದ್ದು ತಾಯಿ ಚಾಮುಂಡೇಶ್ವರಿ ರೈತರಿಗೆ ಮತ್ತು ಕಾರ್ಖಾನೆಯ ಅಭಿವೃದ್ಧಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.
ಕಳೆದ ಸಾಲಿನಲ್ಲಿ 9ಲಕ್ಷದ 78ಸಾವಿರ ಟನ್ ಕಬ್ಬು ಅರೆದಿದ್ದು ಈಗಾಗಲೇ ಮುಂಗಾರು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಕೂಡ ಚೆನ್ನಾಗಿ ಆಗಿದ್ದೇ ಆದಲ್ಲಿ ಕಾರ್ಖಾನೆಗೆ ಮತ್ತಷ್ಟು ಕಬ್ಬು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿ ಕಾರ್ಖಾನೆಯು ಅವಧಿಗೆ ಮೊದಲು ಆರಂಭಿಸಿದ್ದು ಹೆಚ್ಚಿನ ಕಬ್ಬು ಅರೆಯುವ ಉದ್ದೇಶ ಹೊಂದಲಾಗಿದೆ ಹೊಸ ಯಂತ್ರೋಪಕರಣ ಇದಕ್ಕೆ ಕಾರಣವಾಗಿದ್ದು ದಿನಕ್ಕೆ 5500 ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವುದಾಗಿ ಹೇಳಿದರು.
ಕಳೆದ ಸಾಲಿನಲ್ಲಿ ಕೊರೊನಾ ಸಂಕಟ ಕಾಲದಲ್ಲೂ ಕಾರ್ಖಾನೆಯ ಆರಂಭಿಸಿ ಕಬ್ಬು ಅರೆವಿಕೆಗೆ ಚಾಲನೆ ನೀಡಲಾಗಿತ್ತು. ಈ ಹಿಂದಿನ ಸಾಲುಗಳಲ್ಲಿ ಸಹಕರಿಸಿದಂತೆ ಈ ಸಾಲಿನಲ್ಲಿಯೂ ಸಹ ತಾವು ಬೆಳೆದಿರುವ ಕಬ್ಬನ್ನು ಒಪ್ಪಿಗೆ ಮಾಡಿರುವ ಎಲ್ಲಾ ರೈತರು ಕಾರ್ಖಾನೆಗೆ ಸರಬಾರಾಜು ಮಾಡುವ ಮೂಲಕ ಕಾರ್ಖಾನೆಯು ಉತ್ತಮವಾಗಿ ಕಬ್ಬು ಅರೆಯಲು ಕೈಜೊಡಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ರೈತರು ಕಬ್ಬು ಕಡಿಯಲು ಪರ್ಮೀಟ್ ನೀಡಿದ್ದು ಎತ್ತಿನಗಾಡಿ, ಟ್ರ್ಯಾಕ್ಟರ್ ಮತ್ತು ಲಾರಿಗಳ ಮೂಲಕ ಕಾರ್ಖಾನೆಗೆ ಕಬ್ಬು ಆಗಮಿಸುತ್ತಿವೆ. ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ನಡೆಸಿ ಪೂರ್ಣಹೂತಿ ನೀಡಿದ ನಂತರ ಕಾರ್ಖಾನೆಗೆ ಚಾಲನೆ ನೀಡಿ ತದ ನಂತರ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭ ಕಾರ್ಖಾನೆಗೆ ಮೊದಲು ಕಬ್ಬು ತುಂಬಿಕೊಂಡು ಬಂದಂತಹ ಎತ್ತಿನಗಾಡಿ, ಟ್ಯಾಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಪ್ರಧಾನ ವ್ಯವಸ್ಥಾಪಕ ಎಂ.ರವಿ, ಪ್ರಧಾನ ವ್ಯವಸ್ಥಾಪಕ ಸೆಂಥಿಲ್ಕುಮಾರ್, ಕಾರ್ಖಾನೆ ಅಧಿಕಾರಿಗಳಾದ ಮಣಿಮಾರನ್, ನಿತೀಶ್, ನಿಂಗಯ್ಯ ಸೇರಿದಂತೆ ಹಲವರಿದ್ದರು.