ಮಡಿಕೇರಿ ಜೂ.24 : ಕ್ರೀಡೆಯಲ್ಲಿ ತೊಡಗಿಸಿಕೊಂಡವರಲ್ಲಿ ಶ್ರದ್ಧೆ ಮತ್ತು ಕಠಿಣ ಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಹೇಳಿದರು.
ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 6ನೇ ವರ್ಷದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ನ ಕೆಲಸವನ್ನು ಶ್ಲಾಘಿಸಿದ ಅವರು, ಕೆಲವು ತಿಂಗಳುಗಳ ಹಿಂದೆ ಭೇಟಿ ನೀಡಿದಾಗ ಮೂಲಭೂತ ಸೌಕರ್ಯಗಳ ಕೊರತೆಯಿದ್ದ ಒಳಾಂಗಣ ಕ್ರೀಡಾಂಗಣ ಈಗ ಕ್ರೀಡಾ ಪಟುಗಳ ಬಳಕೆಗೆ ಯೋಗ್ಯವಾಗಿದೆ ಎಂದು ಸಂತಸಪಟ್ಟರು. ಶಾಶ್ವತ ಬೆಳಕಿನ ವ್ಯವಸ್ಥೆ ಮತ್ತು ಇನ್ನಷ್ಟು ಕ್ರೀಡಾ ಸಾಮಗ್ರಿಗಳನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.
ಎಲ್ಲರೂ ಗೆದ್ದೇ ಗೆಲ್ಲುತ್ತೇವೆ ಎಂದು ಭಾವಿಸಬಾರದು, ಗೆಲುವಿಗಾಗಿ ಕಠಿಣ ಶ್ರಮ ವಹಿಸಬೇಕು. ಗೆಲವಿಗಿಂತ ಭಾಗವಹಿಸುವಿಕೆ ಮುಖ್ಯ, ಆಗ ಅನುಭವ ಹೆಚ್ಚುತ್ತದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆಗೊಳ್ಳಲ್ಲಿ ಎಂದು ಶುಭ ಹಾರೈಸಿದರು.